ಕಳೆದ ಮೂರು ವರ್ಷಗಳಿಂದ 108, ದೂರವಾಣಿ ಸಂಖ್ಯೆ ರಾಜ್ಯದಲ್ಲಿ ಬಳಕೆಯಲ್ಲಿದೆ. ರಾಜ್ಯದಲ್ಲಿ ಉಚಿತ ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಇರುವುದು ಸರಿಯಷ್ಟೆ. ಅದರೆ ಆ ತುರ್ತು ಚಿಕಿತ್ಸಾ ವಾಹನದ ಕಾರ್ಯ ವೈಖರಿ ಬಗ್ಗೆ ಯಾರು ಗಮನಹರಿಸುತ್ತಿದ್ದಂತಿಲ್ಲ. ಉಚಿತ ತುರ್ತು ಚಿಕಿತ್ಸಾ ವಾಹನವನ್ನು ನಿರ್ವಹಿಸುತ್ತಿರುವ ಚಾಲಕರು ಮತ್ತು ದಾದಿಯರು (ನರ್ಸ್) ಹಾಗು ಉನ್ನತಧಿಕಾರಿಗಳು ಕೆಲವು ಹಣದಾಹಿ ಖಾಸಗಿ ಆಸ್ಪತ್ರೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಿಸುವುದು ಹಾಗು ಆಸ್ಪತ್ರೆಯವರಿಂದ ವಂತಿಗೆ (ಕಮಿಷನ್) ಪಡೆಯುವುದನ್ನು ಒಂದು ವ್ಯಾಪಾರ ಮಾಡಿಕೊಂಡಿದ್ದಾರೆ ಎನ್ನುವ ಶಂಕೆಗಳಿವೆ.
ಈ ವ್ಯವಹಾರ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಸೆಪ್ಟೆಂಬರ್ 01ರ ರಾತ್ರಿ 12 ಗಂಟೆಗೆ ನನ್ನ ಸ್ನೆಹಿತ ತನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅವರನ್ನು ಸೋಲೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ 108 ನಂಬರಿಗೆ ಕರೆ ಮಾಡಿ ವಿನಂತಿಸಿದೆವು. ಆದರೆ ಅವರಿಂದ `ನಾವು ಬೇಕಾದರೆ ನೆಲಮಂಗಲ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ.
ಸೋಲೂರು ಸರ್ಕಾರಿ ಆಸ್ಪತ್ರೆಗಾದರೆ ಬರುವುದಿಲ್ಲ~ ಎಂದು ಕರೆ ಕಡಿತವಾಯಿತು.
ಅಂದರೆ ಇದರ ಅರ್ಥವೆನು? ಇನ್ನು ಮುಂದಾದರೂ ಸಂಬಂಧಪಟ್ಟವರು ಕ್ರಮಕೈಗೊಳ್ಳುತ್ತಾರೆಯೇ?