ಉಡುಪಿ: ಮಣಿಪಾಲದ ಸಂಗಮ ಕಲಾವಿದರ ತಂಡದ ತುಳು ನಾಟಕ `ಕರ್ಣಭಾರ~ ನವದೆಹಲಿಯ ರಾಷ್ಟ್ರೀಯ ಶಾಲೆಯ 14ನೇ ಭಾರತ ರಂಗ ಮಹೋತ್ಸವ ನಾಟಕೋತ್ಸವಕ್ಕೆ ಆಯ್ಕೆಯಾಗಿದೆ ಎಂದು ನಾಟಕ ತಂಡ ತಿಳಿಸಿದೆ.
ಸಂಗಮ ಕಲಾವಿದರು ಕಳೆದ 12 ವರ್ಷಗಳಿಂದ ಉಡುಪಿ ಪರಿಸರದಲ್ಲಿ ಆಧುನಿಕ ರಂಗಭೂಮಿಯ ವಿವಿಧ ಮಜಲುಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಕ್ಸಲಿಸಂ ಬಗ್ಗೆ ಈ ತಂಡ ತುಳುವಿನಲ್ಲಿ ಪ್ರದರ್ಶಿಸಿದ `ಉಂದು ರಾಮಾಯಣ ಅತ್ತ್~ ( ಕನ್ನಡ: ಹಸಿರು ನಾಡಿನ ಕೆಂಪು ಹಾದಿ) ಅನೇಕ ಪ್ರಶಸ್ತಿ ಪಡೆದಿದೆ. ಪೋಲಿಸ್ ಇಲಾಖೆಯ ಪ್ರಾಯೋಜಕತ್ವದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 50ಕ್ಕೂ ಹೆಚ್ಚು ಪ್ರದರ್ಶನ ಕಂಡ ಯಶಸ್ವಿ ನಾಟಕ ಎನಿಸಿದೆ.
ರಾಷ್ಟ್ರೀಯ ನಾಟಕ ಶಾಲೆಯ 14ನೇ ಭಾರತ ರಂಗ ಮಹೋತ್ಸದಲ್ಲಿ ಭಾಗವಹಿಸಲು ರಾಜ್ಯದಿಂದ ಆಯ್ಕೆಯಾದ ಮೂರು ತಂಡಗಳಲ್ಲಿ ಸಂಗಮ ತಂಡವೂ ಒಂದು. ಉತ್ಸವದಲ್ಲಿ ಭಾಸ ಮಹಾಕವಿಯ ಕರ್ಣಭಾರ ನಾಟಕ ಇದೇ14ರಂದು ಪ್ರದರ್ಶನಗೊಳ್ಳಲಿದೆ. ರಂಗ ನಿರ್ದೇಶನದಲ್ಲಿ ಹೊಸ ಛಾಪು ಮೂಡಿಸಿದ ಡಾ.ಶ್ರೀಪಾದ ಭಟ್ ಶಿರಸಿ ಈ ನಾಟಕ ನಿರ್ದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.