ರಾಯಚೂರು: ಅಬಕಾರಿ ಇಲಾಖೆಯ ಅಧಿಕಾರಿ ಹಾಗೂ ಕರ್ತವ್ಯ ಲೋಪವೆಸಗಿದ ಮಾನ್ವಿ ವಲಯ ನಿರೀಕ್ಷಕರನ್ನು ಅಮಾನತುಗೊಳಿಸಬೇಕು ಮತ್ತು ಶಾಲೆ, ದೇವಾಲಯಗಳ ಹತ್ತಿರದಲ್ಲಿರುವ ಮದ್ಯದ ಅಂಗಡಿ ಕೂಡಲೇ ಸ್ಥಳಾಂತರಿಸಬೇಕು ಎಂದು ಜೈ ಕನ್ನಡ ರಕ್ಷಣಾ ವೇದಿಕೆ ಜಿಲ್ಲಾ ಘಟಕವು ಒತ್ತಾಯಿಸಿದೆ.
ಸೋಮವಾರ ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಗುಲ್ಬರ್ಗ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿತು. ಕಳೆದ ಎರಡು ವರ್ಷಗಳಿಂದಲೂ ಜಿಲ್ಲೆಯಾದ್ಯಂತ ಶಾಲೆ ಹಾಗೂ ದೇವಾಲಯಗಳ ಹತ್ತಿರದಲ್ಲಿರುವ ಮದ್ಯದ ಅಂಗಡಿ ಸ್ಥಳಾಂತರಿಸಬೇಕು ಎಂದು ಹೋರಾಟ ನಡೆಸಲಾಗಿದೆ. ರಾಯಚೂರು ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತರು ಮದ್ಯದಂಗಡಿ ಸ್ಥಳಾಂತರಗೊಳಿಸಬೇಕು ಎಂದು ಆದೇಶ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದೆ.
ಜಿಲ್ಲಾಧಿಕಾರಿ ಹಾಗೂ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿ ಆದೇಶ ದಿಕ್ಕರಿಸಿ ನಡೆಸುತ್ತಿರುವ ಸಾಮ್ರಾಟ್ ಮದ್ಯ ಅಂಗಡಿಯನ್ನು ಬೇರೆಡೆ ಸ್ಥಳಾಂತರಿಸಬೇಕು, ಕಾನೂನು ಉಲ್ಲಂಘಿಸಿದ ಮದ್ಯದ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಕಾನೂನು ಉಲ್ಲಂಘಿಸಿ ಮದ್ಯದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳದ ಅಬಕಾರಿ ಅಧಿಕಾರಿ ಹಾಗೂ ತಾಲ್ಲೂಕು ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಶರಣಪ್ಪ ಎನ್ ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಧ್ಯಕ್ಷ ಟಿ.ನರಸಪ್ಪ, ಜಿಲ್ಲಾ ವಕ್ತಾರ ಎಂ.ಶರಣಬಸವ, ಸಂಘಟನಾ ಕಾರ್ಯದರ್ಶಿ ಉರುಕುಂದಿ, ಪ್ರಧಾನ ಕಾರ್ಯದರ್ಶಿ ಎಂ.ವಸಂತಕುಮಾರ, ವೆಂಕಟೇಶ, ಅನಿಲ್ ಕೆ, ಗೋಪಿ, ಈಶ್ವರ, ವೆಂಕಟೇಶ, ಸೂಗಪ್ಪ, ಪ್ರಸಾದ್ ಚಾಂದ್ ಪಾಷಾ ಇದ್ದರು.