ಬೆಂಗಳೂರು: ಆತಿಥೇಯ ಕರ್ನಾಟಕ ತಂಡದವರು ಅಖಿಲ ಭಾರತ ಬಿಎಸ್ಎನ್ಎಲ್ ಹಾಕಿ ಟೂರ್ನಿ ಉದ್ಘಾಟನಾ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸದ್ದಾರೆ. ಸೋಮವಾರ (ಇಂದು) ಆರಂಭವಾಗುವ ಈ ಟೂರ್ನಿ ಫೆಬ್ರುವರಿ 19ರ ವರೆಗೆ ನಡೆಯಲಿದೆ.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಲೀಗ್ ಮತ್ತು ನಾಕ್ೌಟ್ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಒಟ್ಟು ಹದಿನೈದು ತಂಡಗಳು ಭಾಗವಹಿಸಲಿವೆ. ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದು ಪ್ರತಿಯೊಂದು ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಈ ವಿಷಯವನ್ನು ಕರ್ನಾಟಕ ವಲಯ ಬಿಎಸ್ಎನ್ಎಲ್ ಪ್ರಧಾನ ಜನರಲ್ ಮ್ಯಾನೇಜರ್ ಶುಭೇಂದು ಘೋಷ್ ಹಾಗೂ ಬಿಎಸ್ಎನ್ಎಲ್-ಕೆ.ಸಿ.ಎಸ್.ಸಿ.ಬಿ. ಕಾರ್ಯದರ್ಶಿ ಎ.ಎ.ಐ. ಜಯಪ್ರಕಾಶ್ ಭಾನುವಾರ ವರದಿಗಾರರಿಗೆ ತಿಳಿಸಿದರು.
‘ಎ’ ಗುಂಪಿನಲ್ಲಿ ಜಾರ್ಖಂಡ್, ತಮಿಳುನಾಡು, ಪಶ್ಚಿಮಬಂಗಾಳ, ‘ಬಿ’ ಗುಂಪಿನಲ್ಲಿ ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಮಹಾರಾಷ್ಟ್ರ, ‘ಸಿ’ ಗುಂಪಿನಲ್ಲಿ ಒರಿಸ್ಸಾ, ಉತ್ತರ ಪ್ರದೇಶ (ಇ), ಆಂಧ್ರಪ್ರದೇಶ, ರಾಜಾಸ್ತಾನ, ‘ಡಿ’ ಗುಂಪಿನಲ್ಲಿ ಎನ್.ಟಿ.ಆರ್ ದೆಹಲಿ, ಮಧ್ಯಪ್ರದೇಶ, ಎಂ.ಟಿ.ಎನ್.ಎಲ್. ದೆಹಲಿ, ಪಂಜಾಬ್ ತಂಡ ಇದೆ. ಟೂರ್ನಿಯಲ್ಲಿ ಭಾಗವಹಿಸುವ ಕರ್ನಾಟಕ ತಂಡಕ್ಕೆ ಆಯ್ಕೆ ಮಾಡಲಾದ ಆಟಗಾರರ ಹೆಸರುಗಳು ಇಂತಿವೆ.
ಫೆಲಿಕ್ಸ್ ಅಲ್ವಿನ್, ಮೋತಿಲಾಲ್ ರಾಥೋಡ್, ಎಚ್.ಸಿ. ಅಶೋಕ್, ಪ್ರಫುಲ್ ಕುಜೂರ್, ಬಿ.ವಿ. ಅಶೋಕ, ಟಿ.ಜೆ. ಬೋಪಣ್ಣ, ಮಹಮದ್ ನಜೀಮ್ ಬೆಪಾರಿ, ಜಾರ್ಜ್ ಡಾಮ್ನಿಕ್, ಜೆ. ಕೋದಂಡಪಾಣಿ, ಒ.ಇ. ತಿಮ್ಮಯ್ಯ, ಎಸ್. ಕಬಿಲನ್, ಬಿ.ಎಸ್. ದಿವಾಕರ್, ಬೆನೆಡಿಟ್ ವಿನೋದ್, ಕೆ.ಟಿ. ಗಣಪತಿ, ಎಂ.ಎ.ವಿ. ಚೆಂಗಪ್ಪ ಹಾಗೂ ಪಾರ್ಥಿಬನ್. ಮ್ಯಾನೇಜರ್: ಎ.ಎ.ಐ. ಜಯಪ್ರಕಾಶ್, ಕೋಚ್: ಆರ್. ಖಾಜಾ ರಿಯಾಜುದ್ದೀನ್.