ನವದೆಹಲಿ (ಪಿಟಿಐ): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1998ರಲ್ಲಿ ಎನ್ಡಿಎ ಸರ್ಕಾರದಲ್ಲಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಲು ಬಯಸಿದ್ದರು. ಆ ಆಹ್ವಾನ ನಿರಾಕರಿಸಿದ್ದರಿಂದ ನಾಲ್ಕು ವರ್ಷಗಳ ಬಳಿಕ 2002ರಲ್ಲಿ ಅವರು ರಾಷ್ಟ್ರಪತಿಯಾದರು.
-ಇದು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ`ಟರ್ನಿಂಗ್ ಪಾಯಿಂಟ್: ಎ ಜರ್ನಿ ಥ್ರೂ ಚಾಲೆಂಜಸ್~ ಎಂಬ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಸಮಯದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯ ಮುಖ್ಯಸ್ಥರಾಗಿದ್ದ ಕಲಾಂ ಅವರಿಗೆ 1998ರ ಮಾರ್ಚ್ 15ರಂದು ವಾಜಪೇಯಿ ಅವರಿಂದ ದೂರವಾಣಿ ಕರೆ ಬಂದಿತ್ತು.
`ನಾನು ಸಚಿವರ ಪಟ್ಟಿಯನ್ನು ಅಂತಿಮಗೊಳಿಸುತ್ತಿದ್ದೇನೆ ಮತ್ತು ಸಂಪುಟದಲ್ಲಿ ತಮ್ಮನ್ನು ಸೇರಿಸಿಕೊಳ್ಳಲು ಬಯಸಿದ್ದೇನೆ~ ಎಂದು ವಾಜಪೇಯಿ ಹೇಳಿದ್ದರು. ಈ ಬಗ್ಗೆ ಯೋಚಿಸಲು ನನಗೆ ಸ್ವಲ್ಪ ಸಮಯಾವಕಾಶ ನೀಡುವಂತೆ ಕೋರಿದೆ. ಅದಕ್ಕೆ ಬೆಳಿಗ್ಗೆ 9 ಗಂಟೆಗೆ ನನ್ನನ್ನು ಭೇಟಿಯಾಗುವಂತೆ ತಿಳಿಸಿದ್ದರು~ ಎಂದು ಕಲಾಂ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.
ವಾಜಪೇಯಿ ಈ ಆಹ್ವಾನದ ನಂತರ ಸಂಪುಟದಲ್ಲಿ ಸೇರಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಕಲಾಂ ಅವರು ಬೆಳಗಿನ 3 ಗಂಟೆವರೆಗೂ ತಮ್ಮ ಗೆಳೆಯರೊಂದಿಗೆ ಚರ್ಚಿಸಿದರು.
`ದೇಶದ ಮಹತ್ವದ ಎರಡು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದ್ದರಿಂದ ರಾಜಕಾರಣ ಪ್ರವೇಶಿಸಬಾರದು ಎಂದು ಎಲ್ಲ ಗೆಳೆಯರು ನನಗೆ ಸಲಹೆ ನೀಡಿದ್ದರು~ ಎಂದು ಕಲಾಂ ಪ್ರಸ್ತಾಪಿಸಿದ್ದಾರೆ.
ಮರುದಿನ ಬೆಳಿಗ್ಗೆ ಕಲಾಂ ಪ್ರಧಾನಿ ನಿವಾಸಕ್ಕೆ ತೆರಳಿ `ನಾನು ಮತ್ತು ನನ್ನ ಸಹೋದ್ಯೋಗಿಗಳು ಒಂದು ಮಹತ್ವದ ಕಾರ್ಯಕ್ರಮದಲ್ಲಿ ತೊಡಗಿದ್ದೇವೆ. ಅಗ್ನಿ ಕ್ಷಿಪಣಿ ಮತ್ತು ಪರಮಾಣು ಸರಣಿ ಕಾರ್ಯದಲ್ಲಿ ನಿರತವಾಗಿದ್ದೇವೆ. ಈ ಎರಡೂ ಕಾರ್ಯಕ್ರಮಗಳಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎನ್ನುವುದು ನನ್ನ ಭಾವನೆ. ದೇಶಕ್ಕೆ ನಾನು ಹೆಚ್ಚಿನ ಕೊಡುಗೆ ಸಲ್ಲಿಸಬೇಕಿದ್ದು, ಅದರಲ್ಲಿಯೇ ಮುಂದುವರಿಯಲು ಅವಕಾಶ ಕಲ್ಪಿಸಿಕೊಡಬೇಕು~ ಎಂದು ತಮ್ಮ ನಿರ್ಧಾರ ತಿಳಿಸಿದರು.
`ಸೋನಿಯಾ ಪ್ರಧಾನಿ ಹುದ್ದೆಗೆ ಅರ್ಹರಾಗಿದ್ದರು~
ನೊಯಿಡಾ(ಉತ್ತರ ಪ್ರದೇಶ) (ಪಿಟಿಐ): ಸೋನಿಯಾ ಗಾಂಧಿ ಅವರ ಪೌರತ್ವವನ್ನು ಸುಪ್ರೀಂ ಕೋರ್ಟ್ ಊರ್ಜಿತಗೊಳಿಸಿದ ಹಿನ್ನೆಲೆಯಲ್ಲಿ ಸಂವಿಧಾನಾತ್ಮಕವಾಗಿ ಅವರು ಪ್ರಧಾನಿ ಹುದ್ದೆಗೆ ಅರ್ಹರಾಗಿದ್ದರು ಎಂದು ಕಲಾಂ ಹೇಳಿದ್ದಾರೆ.
ಯುಪಿಎ ಮೈತ್ರಿಕೂಟ 2004ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದ್ದಾಗ ಸೋನಿಯಾರನ್ನು ಸರ್ಕಾರ ರಚನೆಗೆ ಆಹ್ವಾನಿಸಲು ತಾವು ಸಿದ್ದರಿದ್ದರೂ ಅವರೇ ಈ ಬಗ್ಗೆ ಮನಸ್ಸು ಮಾಡಲಿಲ್ಲ ಎಂದು ಕಲಾಂ ಅವರು ತಮ್ಮ `ಟರ್ನಿಂಗ್ ಪಾಯಿಂಟ್ಸ್ ~ ಪುಸ್ತಕದಲ್ಲಿ ಉಲ್ಲೇಖಸಿರುವುದಕ್ಕೆ ವಿವಿಧ ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆ ಕೇಳಿಬಂದ ಹಿನ್ನೆಲೆಯಲ್ಲಿ ಕಲಾಂ ಈ ವಿವರಣೆ ನೀಡಿದ್ದಾರೆ.
ಎನ್ಡಿಎ ಸಂಚಾಲಕ ಜೆಡಿಯು ನಾಯಕ ಶರದ್ ಯಾದವ್ ಅವರು ಈ ಹೇಳಿಕೆ ಬಹಳ ಅಸಮಾಧಾನ ತಂದಿದೆ ಎಂದು ಹೇಳಿದ್ದರೆ, ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ, ಇದು ಕಲಾಂ ಅವರ `ಆಷಾಢಭೂತಿ~ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಬಿಜೆಪಿ ಸಹ ಈ ಹೇಳಿಕೆಯನ್ನು ವಿರೋಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.