ಕಾರವಾರ: ಕಾಜುಭಾಗನಲ್ಲಿರುವ ಸಾಗರ ಅಪಾರ್ಟ್ಮೆಂಟ್ನ ಹೊಲಸು ನೀರು ಅಕ್ಕಪಕ್ಕದ ಮನೆಗಳ ಬಾವಿಗಳಿಗೆ ಸೇರಿ ನೀರು ಕಲುಷಿತಗೊಳಿಸಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜಾಗೃತ ಸಮಿತಿ ಅಧ್ಯಕ್ಷ ನಾರಾಯಣ ಶಾನಭಾಗ ಆಗ್ರಹಿಸಿದ್ದಾರೆ.
ಈ ಕುರಿತು ಶಾನಭಾಗ ಅವರು ಅವರ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದು ಅಪಾರ್ಟ್ಮೆಂಟ್ನಿಂದ ಬರುವ ಹೊಲಸು ನೀರಿನಿಂದ ಸೂಸುವ ವಾಸನೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ಗೆ ಹೋಗುವ ರಸ್ತೆಯನ್ನು ನವೀಕರಣ ಮಾಡುವ ನೆಪದಲ್ಲಿ ಆಳವಾಗಿ ಕಡಿದು ಚರಂಡಿ ನಿರ್ಮಿಸಿ ಅದರ ಮೂಲಕ ಅಪಾರ್ಟ್ಮೆಂಟಿನ ನೀರನ್ನು ರಸ್ತೆ ಮೇಲೆ ಬಿಡುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಪಾರ್ಟ್ಮೆಂಟ್ನಿಂದ ಹರಿದು ಬರುವ ನೀರು ದಾಮೋದರ ವೆಂಕು ನಾಯ್ಕ ಹಾಗೂ ಮದನ ಪಾವಸ್ಕರ ಎಂಬುವರ ಕಂಪೌಂಡಿನಲ್ಲಿ ಹರಿದು ಹೋಗಿದ್ದು ಅಲ್ಲಿ ಕೊಳಚೆ ನೀರಿನ ಕೆರೆಯೇ ನಿರ್ಮಾಣವಾಗಿದೆ ಎಂದು ವಿವರಿಸಲಾಗಿದೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೃಷ್ಣಯ್ಯ ಕೂಡಲೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.