ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯ ಬಣ್ಣಗಳ ಒಗ್ಗೂಡಿಸುತ್ತ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

`ಇಲ್ಲ, ಯಾವತ್ತೂ ಅಂದುಕೊಂಡಿರಲಿಲ್ಲ. ಕೆಲಸ ಬಿಟ್ಟು, ಕರಕುಶಲ ಕರ್ಮಿಗಳನ್ನು ಹುಡುಕಿಕೊಂಡು ದೇಶವನ್ನೆಲ್ಲ ಅಲೆದಾಡುವೆ ಅಂತ ಎಂದೂ ಅಂದುಕೊಂಡಿರಲಿಲ್ಲ. ಆದರೆ ಒಂದು ವರ್ಷಗಳ ಅವಧಿಯಲ್ಲಿ ದೇಶದ ಯಾವ ಮೂಲೆಯಲ್ಲಿ ಏನು ಸಿಗಬಲ್ಲದು ಎಂಬ ವಿವರ ಬೆರಳ ತುದಿಯಲ್ಲಿದೆ...~ ಎಂದು ಐಶ್ವರ್ಯಾ ಸುರೇಶ್ ಹೇಳುತ್ತಿದ್ದರು.

ವೃತ್ತಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್. ಐಟಿ ಕ್ಷೇತ್ರದಲ್ಲಿ ದುಡಿದ 10 ವರ್ಷಗಳ ಅನುಭವ ಇದೆ. ಆದರೆ ಈ ಶ್ರಮ ಮತ್ತು ಗಳಿಕೆ ಎರಡೂ ಕೊಳ್ಳುವ ಶಕ್ತಿಯನ್ನು ನೀಡಿದವು. ಆದರೆ ಸಂತೃಪ್ತಿಯನ್ನು ನೀಡಲಿಲ್ಲ.

ಹಸ್ತಕಲೆಯಲ್ಲಿ ಆಸಕ್ತಿ ಇದ್ದ ಐಶ್ವರ್ಯಾ ಕ್ರಾಫ್ಟ್ ಮೇಳಗಳಿಗೆ ಹೋದಾಗಲೆಲ್ಲ ಕಲಾವಿದರ ಬಗ್ಗೆ ವಿಚಾರಿಸುತ್ತಿದ್ದರು. ಬಹುತೇಕ ಕಡೆ ಕಲಾವಿದರು ಎಲ್ಲಿಯೋ ಇದ್ದರೆ ಮಧ್ಯವರ್ತಿಗಳೇ ಮಾರಾಟಗಾರರು ಆಗಿರುವುದು ಕಂಡು ಬರುತ್ತಿತ್ತು.

ಆಗಲೇ ಕಲಾವಿದರಿಗೊಂದು ನೇರ ಮಾರುಕಟ್ಟೆ ಒದಗಿಸುವ ಕನಸು ಹುಟ್ಟಿತು. ಕೆಲಸಕ್ಕೆ ರಾಜೀನಾಮೆ ಕೊಟ್ಟರು. ತಮ್ಮ ಹವ್ಯಾಸವನ್ನೇ ಕೆಲಸ ಮಾಡಿಕೊಂಡರು. ಬಾಳೆ ನಾರಿನ ಎಸಳಿನ ಸೀರೆ ಕಂಡಾಗ ಸಿದ್ಧ ಪಡಿಸಿದ ಕಲಾವಿದರನ್ನು ಕಾಣುವ ಅದಮ್ಯ ಬಯಕೆ ಮೂಡಿತು.

ಪರಿಣಾಮ ಅವರು ಗುಜರಾತ್‌ವರೆಗೂ ಪ್ರಯಾಣ ಮಾಡಬೇಕಾಯಿತು. ಅಲ್ಲಿಯ ನೇಕಾರರ ಸಮೂಹವೊಂದು ಸಾವಿರ ವರ್ಷಗಳಿಂದಲೂ ಈ ನೇಯ್ಗೆಯಲ್ಲಿ ನಿರತವಾಗಿದೆ. ಈಶಾನ್ಯ ಭಾರತದಲ್ಲಿ ಚರ್ಮಕಲೆಯಲ್ಲಿ ನಿರತರಾದ ಕಲಾವಿದರ ಭೇಟಿಯಾಯಿತು.

ಭಾರತದಾದ್ಯಂತ ಸಂಚರಿಸುವಾಗ ವಿವಿಧ ರಾಜ್ಯಗಳಲ್ಲಿ ಕೆಲವೇ ನೂರು ಜನ ಕಲಾವಿದರ ಕೈಯಲ್ಲಿ ಅರಳುತ್ತಲೇ ಅಳಿವಿನಂಚಿಗೆ ಸರಿಯುತ್ತಿರುವ ಹಲವಾರು ಕರಕುಶಲ ಕಲೆಗಳ ಪರಿಚಯವಾಯಿತು.

ಆಗಲೇ ಐಶ್ವರ್ಯಾ ನಿರ್ಧರಿಸಿ, ಈ ಕಲಾವಿದರನ್ನು ಒಗ್ಗೂಡಿಸಿದರು. ಅವರ ನಡುವೆ ಸ್ವಸಹಾಯ ಸಮೂಹಗಳನ್ನು ರಚಿಸಿದರು. ಕಲಾವಿದರನ್ನು ಕರೆಯಿಸಿ, ಅವರ ಉತ್ಪನ್ನಗಳ ಮಾರಾಟದ ವ್ಯವಸ್ಥೆಯನ್ನು ಮಾಡಿದರು. ಕಲಾವಿದರಿಗೆ ತಮ್ಮ ಕಲಾಕೃತಿಗಳು ಉತ್ತಮ ಬೆಲೆಗೆ ಮಾರಾಟವಾಗುವುದನ್ನು ಕಂಡಾಗ ಅವರ ಕಂಗಳಲ್ಲಿ ಆಶಾಭಾವ ಮೂಡುತ್ತಿತ್ತು.
 
ಅದು ಐಶ್ವರ್ಯಾ ಅವರಿಗೆ ಸಮಾಧಾನ ತರುತ್ತಿತ್ತಂತೆ. ಹೀಗೆ ವಿವಿಧ ರಾಜ್ಯದ ವಿವಿಧ ಬಣಗಳ ಕಲಾವಿದರನ್ನು ಒಂದೇ ಸೂರಿನಡಿ ತಂದದ್ದು ಐಶ್ವರ್ಯಾ ಆರಂಭಿಸಿದ `ಬಣ್ಣ ಕ್ರಿಯೇಷನ್ಸ್~.

ಕೇವಲ ಕರಕುಶಲ ವಸ್ತು ಹಾಗೂ ಕೈಮಗ್ಗದ ವಸ್ತ್ರವೈಭವಕ್ಕೆ ಮಾತ್ರ ಸೀಮಿತವೇ ಎಂಬ ಪ್ರಶ್ನೆಯೂ ಇವರನ್ನು ಕಾಡುತ್ತಿತ್ತು. ಆಗ ಬುಡಕಟ್ಟು ಜನಾಂಗದ ಲಲಿತ ಕಲೆಯತ್ತ ಗಮನ ಹೊರಳಿತು. ಪರಿಣಾಮ ಫಾಡ್ ಕಲೆಯನ್ನು ಮುಖ್ಯವಾಹಿನಿಗೆ ತರಲಾರಂಭಿಸಿದರು. ಕೇವಲ ಫಾಡ್ ಕಲಾಕೃತಿಗಳ ಮಾರಾಟ ಮಾತ್ರವಲ್ಲ, ಜನರಲ್ಲಿ ಅಭಿರುಚಿ ಹುಟ್ಟಿಸಲು ಕಾರ್ಯಾಗಾರಗಳನ್ನು ಆರಂಭಿಸಿದರು.
 
ಈಗ ಫಾಡ್ ಕಲೆಯೊಂದಿಗೆ ಉತ್ತರ ಕರ್ನಾಟಕದ ಕಸೂತಿ ಕಲೆಯ ಶಿಬಿರವನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಕೈಮಗ್ಗ, ಕರಕುಶಲ ಕಲೆಯ ಕಲಾವಿದರನ್ನು ಒಗ್ಗೂಡಿಸುವುದು, ಅವರನ್ನೇ ಸಂಪನ್ಮೂಲ ವ್ಯಕ್ತಿಗಳಾಗಿಸಿ, ಮುಖ್ಯವಾಹಿನಿಗೆ ಈ ಕಲೆಯನ್ನು ತರುವುದು ಬಣ್ಣ ಕ್ರಿಯೇಷನ್ಸ್‌ನ ಉದ್ದೇಶವಾಗಿದೆ ಎಂಬುದು ಐಶ್ವರ್ಯಾ ಸುರೇಶ್ ಅವರ ಮಾತಾಗಿದೆ.

`ಸಾಕಷ್ಟು ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಜನರಿಗೆ ತರಬೇತಿ ನೀಡಬೇಕು. ಜನರಲ್ಲಿ ಅಭಿರುಚಿ ಹುಟ್ಟಿಸಬೇಕು. ಕಲಾವಿದರಿಗೆ ಆರ್ಥಿಕ ಸಹಾಯ ಲಭಿಸಬೇಕು. ಕಲೆ ಶ್ರೀಮಂತವಾಗಬೇಕು. ಈ ನಿಟ್ಟಿನಲ್ಲಿ ಬಣ್ಣ ಶ್ರಮಿಸುತ್ತಿದೆ~ ಎನ್ನುವುದು ಅವರ ಮಾತು.

ಕ್ರೊಚೆಟ್, ಬ್ಲಾಕ್‌ಪ್ರಿಂಟಿಂಗ್, ಕಸೂತಿ ಮತ್ತಿತರ ಜನಪದ ಕಲೆಗಳಿಗೆ ಸಂಬಂಧಿಸಿದಂತೆ ಪ್ರತಿ ಎಂಟು ವಾರಗಳಿಗೊಮ್ಮೆ ಒಂದೊಂದು ಕಲಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಕಲಾ ಪ್ರಕಾರದ ಹಿರಿಯ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುತ್ತಿದ್ದಾರೆ.

`ಬಣ್ಣ ಕ್ರಿಯೇಷನ್~ನ ಪ್ರತಿಯೊಂದು ಉತ್ಪನ್ನವೂ ಒಂದೊಂದು ಕತೆ ಹೇಳುತ್ತದೆ ಎನ್ನುವುದು ಇವರ ನಂಬಿಕೆ. ಕಲೆ ಕಲಾವಿದರ ಬಗ್ಗೆ ಆಸಕ್ತಿ ಇದ್ದರೆ ಸಂಪರ್ಕಿಸಲು ಐಶ್ವರ್ಯಾ ಸುರೇಶ್ 9945611081; bannacreations@gmail.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT