ನವದೆಹಲಿ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಎದುರಿಸುತ್ತಿರುವ ಕಲ್ಲಿದ್ದಲು ಸಮಸ್ಯೆಯನ್ನು 48 ಗಂಟೆಯೊಳಗೆ ಪರಿಹರಿಸುವುದಾಗಿ ಕೇಂದ್ರ ಭರವಸೆ ನೀಡಿದೆ.
ಕಲ್ಲಿದ್ದಲು ಸಮಸ್ಯೆಯಿಂದ ಉಷ್ಣ ವಿದ್ಯುತ್ ಸ್ಥಾವರಗಳು ಉತ್ಪಾದನೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಜೈಪ್ರಕಾಶ್ ಜೈಸ್ವಾಲ್ ಮಂಗಳವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಈ ಭರವಸೆ ನೀಡಿದ್ದಾರೆ.
ಕಲ್ಲಿದ್ದಲು ಸಮಸ್ಯೆಯಿಂದ ರಾಯಚೂರು ಉಷ್ಣ ವಿದ್ಯುತ್ ಸ್ಥಾವರದ ಎಂಟು ಘಟಕಗಳ ಪೈಕಿ ಐದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಮೂರು ಘಟಕಗಳು ಬಂದ್ ಆಗಿದೆ. ಸರ್ಕಾರಿ ಸ್ವಾಮ್ಯದ ಎನ್ಟಿಪಿಸಿ ಘಟಕಗಳು ಸೇರಿದಂತೆ ಎಲ್ಲ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಹೆಚ್ಚಿನ ಕಲ್ಲಿದ್ದಲು ಪೂರೈಸಲು ಕೇಂದ್ರ ಪ್ರಯತ್ನಿಸಲಿದೆ.
ಕಲ್ಲಿದ್ದಲು ಕೊರತೆಯಿಂದ ಎನ್ಟಿಪಿಸಿ ಘಟಕಗಳು ಸಾಮರ್ಥ್ಯಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದನೆ ಮಾಡುತ್ತಿವೆ.
ವಿದ್ಯುತ್ ಉತ್ಪಾದನೆ ಸಮಸ್ಯೆ ಆಗದಂತೆ ಕಲ್ಲಿದ್ದಲು ಪೂರೈಸಲು ಮುಂದಾಗುವಂತೆ ಸರ್ಕಾರ ಸೋಮವಾರ ಕಲ್ಲಿದ್ದಲು ಉದ್ಯಮಗಳಿಗೆ ಸೂಚಿಸಿದೆ.