ಉಡುಪಿ: ಉಡುಪಿ ತಾಲ್ಲೂಕಿನ ನಾಲ್ಕೂರು ಗ್ರಾಮದ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು ತಿಳಿಸಿದ್ದಾರೆ.
ಗಣಿಗಾರಿಕೆ, ಜಲ್ಲಿ ಕ್ರಶರ್ಗಳನ್ನು ಸ್ಥಗಿತಗೊಳಿಸುವಂತೆ ಆ ಗ್ರಾಮದ ಜನರು ಮನವಿ ನೀಡಿದ್ದರು. ಇದಕ್ಕೆ ಸ್ಪಂದಿಸಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ ಜಿಲ್ಲಾಡಳಿತ ಸಮಗ್ರ ಸರ್ವೆ ನಡೆಸಿದ್ದು ಸರ್ವೆ ನಂ. 219/1 ರಲ್ಲಿ 1693.94 ಎಕರೆ ಪ್ರದೇಶವು ಸರ್ಕಾರಿ ಸ್ಥಳವೆಂದು ನಮೂದಾಗಿದೆ. ಅದರಲ್ಲಿ 1492.44 ಎಕರೆ ಪರಿಭಾವಿತ ಅರಣ್ಯವಾಗಿರುತ್ತದೆ. ಉಳಿದ 201.50 ಎಕರೆ ಸರ್ಕಾರಿ ಪ್ರದೇಶವಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲ್ಕೂರು ಗ್ರಾಮದಲ್ಲಿ ಒಟ್ಟು ಒಟ್ಟು 24.60 ಎಕರೆ ಪ್ರದೇಶದಲ್ಲಿ 16 ಕಲ್ಲು ಗಣಿ ಗುತ್ತಿಗೆಗಳಿವೆ. ನಾಲ್ಕೂರು ಗ್ರಾಮದಲ್ಲಿ 14.75 ಎಕರೆ ಪ್ರದೇಶದಲ್ಲಿ ಕಲ್ಲುಪುಡಿ ಮಾಡುವ ಘಟಕಗಳನ್ನು ನಿಯಂತ್ರಣಾ ಆಧ್ಯಾದೇಶ 2011ರಂತೆ ಸುರಕ್ಷಿತ ವಲಯವಾಗಿ ಘೋಷಣೆಯಾಗಿದೆ. ಅದರಲ್ಲಿ ಒಟ್ಟು 5 ಕ್ರಷರ್ ಸ್ಥಾಪನೆಗೆ ಪರವಾನಗಿ ನೀಡಲಾಗಿದೆ ಮತ್ತು ಆಧ್ಯಾದೇಶದ ನಿಯಮ 7ರಂತೆ ನವಯುಗ ಇಂಜಿನಿಯರಿಂಗ್ ಕಂಪನಿ ಹಾಗೂ ಆರ್.ಎಸ್.ಕಿಣಿ ರೈಲ್ವೆ ಕಾಮಗಾರಿ ಕೆಲಸಕ್ಕೆ ಇಬ್ಬರಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುರಕ್ಷಿತ ವಲಯವೆಂದು ಮತ್ತು ಕಲ್ಲು ಗಣಿ ಗುತ್ತಿಗೆಗಳಿಗೆ ನೀಡಿರುವ ಪ್ರದೇಶಗಳು ಕಲ್ಲು ಬಂಡೆಗಳಿಂದ ಕೂಡಿದ್ದು, ಅತಿ ವಿರಳವಾಗಿ ಮರ-ಗಿಡಗಳಿರುವುದರಿಂದ ಸದರಿ ಪ್ರದೇಶವನ್ನು ಸರ್ಕಾರಿ ಪ್ರದೇಶವೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದಾರೆ.
ನಾಲ್ಕೂರು– ನಂಚಾರು ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಶರ್ಗಳಿಂದ ಪರಿಸರ ಮಾಲಿನ್ಯ ಉಂಟಾಗಿ ತೀವ್ರ ತೊಂದರೆ ಆಗುತ್ತಿದ್ದು ಎಲ್ಲ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ, ಬಂದ್ ನಡೆಸಿದ್ದರು.