ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆ ಎಂಬ ಕಳ್ಳ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಕಳೆಗಳೆಂದರೆ ಸಸ್ಯಲೋಕದ `ಕಳ್ಳರು ಹಾಗೂ ದರೋಡೆಕೋರರು~. ಅವು ಸಸ್ಯಗಳಿಂದ ನೀರು, ಆಹಾರ ಮತ್ತು ಸೂರ್ಯರಶ್ಮಿಗಳನ್ನು ಕದಿಯುತ್ತವೆ. ಕೆಲವು ಜಾನುವಾರುಗಳಿಗೆ ಅವು ವಿಷಕಾರಿಯೂ ಹೌದು. ಮನುಷ್ಯರಿಗೆ ರೋಗ ತರಬಲ್ಲವು. ಇಂಥ ಒಂದು ಕಳೆ ಮುಸುಕಿನ ಜೋಳ ಹಾಗೂ ಇತರ ಸಸ್ಯಗಳ ಬೇರುಗಳಿಂದ ಆಹಾರವನ್ನು ಹೀರಿ ಅವನ್ನೇ ಕೊಲ್ಲುತ್ತದೆ. ಇದರಿಂದ ರೈತರಿಗೆ ಅಪಾರ ಬೆಳೆ ನಷ್ಟವಾಗುತ್ತಿದೆ.

ಈ ಕಳೆಯ ವೈಜ್ಞಾನಿಕ ಹೆಸರು ಕ್ಯಾನಬಿಸ್ ಸಟೈವಾ ಎಂದು. ಇದು ಕ್ಯಾನಬೇಸಿಯೆ ಕುಟುಂಬಕ್ಕೆ ಸೇರಿದೆ. ಇಂಗ್ಲಿಷ್‌ನಲ್ಲಿ ಕಳೆಯನ್ನು ವೀಡ್ ಎಂದು, ಹಿಂದಿಯಲ್ಲಿ ಬಾಗ್ ಧೋಕ, ತಮಿಳಿನಲ್ಲಿ ವಲಪ್ಪಮ್, ತೆಲುಗಿನಲ್ಲಿ ಅಲಮು, ಮಲಯಾಳಂನಲ್ಲಿ ಬೇರ್ಸ್‌, ಗುಜರಾತಿಯಲ್ಲಿ ಅಜಮಾ ಹಾಗೂ ಮರಾಠಿಯಲ್ಲಿ ವಿಡ್‌ಶನವೆಂದು ಕರೆಯಲಾಗುತ್ತದೆ.
ಕಳೆಗಳಿಂದಾಗುವ ನಷ್ಟ ಅಧಿಕ. 1952 ರಲ್ಲಿ ಅಮೆರಿಕದಲ್ಲಿ ಕಳೆಗಳಿಂದ ರೈತರಿಗೆ 400 ಕೋಟಿ ಡಾಲರ್ ಲುಕ್ಸಾನಾಗಿತ್ತು. ಅಂದರೆ ಪ್ರತಿ ರೈತನಿಗೂ ಆದ ನಷ್ಟ ಸರಿಸುಮಾರು ಸಾವಿರ ಡಾಲರು.

1944ಕ್ಕೆ ಮೊದಲು ಕಳೆಗಳ ನಾಶ ಕೈಯಿಂದ ನಡೆಯುತ್ತಿತ್ತು. ಕೆಲವು ಕಳೆಗಳಿಗೆ ಮಾತ್ರ ರಾಸಾಯನಿಕಗಳಿದ್ದವು. ರೈತನೆಂದರೆ ಕಳೆ ತೆಗೆಯುವ  ಕುಡುಗೋಲನ್ನು (ಕುರ್ಚಿಗಿ) ಹಿಡಿದ ಮನುಷ್ಯ ಎಂದರ್ಥವಾಗಿತ್ತು! ಅನೇಕ ಗಂಟೆಗಳ ಕಾಲ ಮೈಮುರಿದು ಕೆಲಸ ಮಾಡಬೇಕಾಗಿತ್ತು. ಭಾರತದ ಅನೇಕ ರಾಜ್ಯಗಳಲ್ಲಿ ಈಗಲೂ ಸಹ ರೈತರು ಕಳೆ ತೆಗೆಯಲು ಹಾಗೆಯೇ ಮಾಡಬೇಕಾಗಿದೆ.

ರೈಲು, ರಸ್ತೆ, ಕೈಗಾರಿಕಾ ಸ್ಥಳಗಳು, ಕಟ್ಟಡಗಳ ಸುತ್ತ - ಮುತ್ತ ಹಾಗೂ ಹೆದ್ದಾರಿಯ ಬದಿಗಳಲ್ಲಿ ಕಳೆಗಳು ಹೆಚ್ಚು. ಮಕ್ಕಳಿಗೆ ಕಳೆಗಳಿಂದ ತುರಿಕೆಗಳಾಗುತ್ತವೆ. ಹಸು, ಮೇಕೆ ಹಾಗೂ ಕುರಿಗಳಿಗೆ ಹುಣ್ಣುಗಳಾಗುತ್ತವೆ.

ಹೊಲ - ಗದ್ದೆಗಳಲ್ಲಿ ಕಳೆಗಳು ಹೆಚ್ಚು. 1944 ರಲ್ಲಿ ಹಾರ್ಮೋನ್ ಆಧಾರಿತ ಕಳೆನಾಶಕಗಳು ಬಳಕೆಗೆ ಬಂದವು. ದ್ವಿದಳ ಮತ್ತು ಏಕದಳ ಕಳೆಗಳಿಗೆ ಪ್ರತ್ಯೇಕವಾದ ಕಳೆನಾಶಕಗಳಾದವು. ಈಗ ಸಾಮಾನ್ಯ ಕಳೆನಾಶಕಗಳಿಂದ ಎಂಥ ಕಳೆಗಳನ್ನಾಗಲೀ ನಾಶಪಡಿಸಬಹುದು, ಜಮೀನನ್ನು ಹದ ಮಾಡಬಹುದು. ಇದರಿಂದ ಒಳ್ಳೆಯ ಬೆಳೆಯನ್ನು ನಿರೀಕ್ಷಿಸಬಹುದು. ಕಾಲುವೆ, ಕೊಳ, ಚರಂಡಿಗಳಲ್ಲೂ ಸಹ ಬೆಳೆದಿರುವ ಕಳೆಗಳನ್ನು ರಾಸಾಯನಿಕಗಳಿಂದ ನಾಶಪಡಿಸಬಹುದು.

ಕಳೆನಾಶಕ ಸಿಂಪಡಿಸಿದ ಮೊದಲನೆ ದಿನದಿಂದಲೇ ಕಳೆಗಳು ನೀರು ಮತ್ತು ಪೋಷಕಾಂಶ ಹೀರುವುದನ್ನು ನಿಲ್ಲಿಸುತ್ತವೆ. ಬೆಳೆಯಲು ಅತ್ಯಂತ ಮುಖ್ಯವಾದ ಈ ಎರಡು ಅಂಶಗಳು ಪೋಲಾಗದೆ ಮುಖ್ಯ ಬೆಳೆಗಳಿಗೆ ದೊರಕುತ್ತವೆ. ಇದರಿಂದ ಇಳುವರಿ ಹುಲುಸಾಗಿರುತ್ತದೆ.

ಕಳೆನಾಶಕ ಸಿಂಪಡಿಸಿದಾಗ ಅದರಲ್ಲಿನ ಅಂಶ ಎಲೆಗಳ ಮುಖಾಂತರ ಕಳೆಗಳ ಕಾಂಡ ಮತ್ತು ಬೇರುಗಳಿಗೆ ಹೋಗುತ್ತದೆ. ಅದು ಬಹುಕಾಲಿಕ ಕಳೆಗಳ ಬೇರು ಮತ್ತು ಗುಪ್ತಕಾಂಡಗಳನ್ನು ನಾಶಪಡಿಸುತ್ತದೆ.

ಕಳೆನಾಶಕಗಳ ಬಳಕೆಯಿಂದ ಖರ್ಚು ಸಹ ಕಡಿಮೆಯಾಗುತ್ತದೆ. ಜಮೀನಿನಲ್ಲಿ ಮಾತ್ರವಲ್ಲದೆ ನಗರಗಳಲ್ಲಿ ಕಳೆಗಳ ನಾಶದಿಂದ ಉದ್ಯಾನಗಳು ಸುಂದರವಾಗಿ ಕಂಗೊಳಿಸುತ್ತವೆ.

ಕಳೆನಾಶಕ ಬಳಕೆಯ ನಿಯಮಗಳು
* ಕಳೆ ಯಾವುದು ಎಂಬುದನ್ನು ನಿರ್ದಿಷ್ಟವಾಗಿ ತಿಳಿದಿರಬೇಕು. ಸಿಂಪಡಿಸುವ ಸಮಯದಲ್ಲಿ ಕಳೆಗಳು ಹುಲುಸಾಗಿ ಹಸಿರಿನಿಂದ ಕೂಡಿದ್ದು, ಎಲೆಗಳನ್ನು ಹೊಂದಿರಬೇಕು (ಸುಮಾರು 6 ರಿಂದ 9 ಇಂಚು ಎತ್ತರವಿರಬೇಕು)

* ಸರಿಯಾದ ಪರಿಣಾಮಕಾರಿ ಕಳೆನಾಶಕವನ್ನು ಆರಿಸಿಕೊಳ್ಳಬೇಕು. ಅದರಿಂದ ಬೇರೆ ಗಿಡಗಳಿಗೆ ತೊಂದರೆ ಆಗಬಾರದು.

* ಕಳೆನಾಶಕ ಬಳಸುವಾಗ ಮಣ್ಣಿನಲ್ಲಿ ತೇವಾಂಶವು ಅತ್ಯಗತ್ಯ. ಹವೆ ಮತ್ತು ಕಳೆಗಳ ವಯಸ್ಸನ್ನು ಅನುಸರಿಸಿ ಕಳೆನಾಶಕ ಉಪಯೋಗಿಸಬೇಕು.

* ಸರಿಯಾದ ಪ್ರಮಾಣದಲ್ಲಿ ಕಳೆನಾಶಕವನ್ನು ನೀರು, ಭೂಮಿಗೆ ಬೆರೆಸಬೇಕು. ಹೆಚ್ಚು ಕಡಿಮೆ ಮಾಡಬಾರದು. ಮೊಟ್ಟಮೊದಲಿಗೆ, ಅದನ್ನು ಸಿಂಪಡಿಸುವ ವಿಧಾನದ ಬಗ್ಗೆ ನುರಿತ ಕೃಷಿ ತಜ್ಞರೊಡನೆ ಚರ್ಚಿಸಿರಬೇಕು.

* ದ್ರಾವಣ ತಯಾರಿಕೆ ಮತ್ತು ಸಿಂಪಡಿಸುವಿಕೆಗೆ ಶುದ್ಧ ನೀರನ್ನು ಉಪಯೋಗಿಸಬೇಕು. ಪ್ಲಾಸ್ಟಿಕ್ ಬಕೆಟ್‌ನಲ್ಲಿಯೇ ದ್ರಾವಣವನ್ನು ತಯಾರಿಸಬೇಕು.

* ಕಳೆಗಳು ಬೀಜಾವಸ್ಥೆಗೆ ಬರುವ ಮುನ್ನವೇ ಕಳೆನಾಶಕ ಬಳಸಿ ಅವುಗಳನ್ನು ಕೊಲ್ಲಬೇಕು.

* ಸಿಂಪರಣೆ ನಂತರ ಕನಿಷ್ಠ 4 ಗಂಟೆ ವರೆಗೆ ಮಳೆ ಬರುವ ಸೂಚನೆಯಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT