ಚಿಕ್ಕಮಗಳೂರು: ಕಸ ಸಂಗ್ರಹಿಸುವ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.
ನಗರದ ಸ್ವಚ್ಛತೆಗೆ ಈ ಹಿಂದೆ ಗಂಟೆ ಗಾಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ನ್ಯಾಯಾಲಯದ ಆದೇಶದಂತೆ ಸ್ವಚ್ಛ ಟ್ರಸ್ಟ್ ಪ್ರತಿ ಕಾರ್ಮಿಕರಿಗೆ 32 ಸಾವಿರ ರೂಪಾಯಿ ಪರಿಷ್ಕರಣೆ ದರದಂತೆ 9.28ಲಕ್ಷ ರೂಪಾಯಿ ನೀಡಬೇಕೆಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಸ್ವಚ್ಛ ಟ್ರಸ್ಟ್ನ ಗಂಟೆಗಾಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಮಂಜುನಾಥ ಅನಾರೋಗ್ಯದಿಂದ ಸಾವನ್ನಪ್ಪಿದ್ದು, ಆತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಗಂಟೆ ಗಾಡಿಯಲ್ಲಿ ಕೆಲಸ ಮಾಡುತ್ತಿರುವ ನೌಕರರರನ್ನು ಕಾಯಂಗೊಳಿಸಬೇಕು. ಈ ಕಾರ್ಮಿಕರಿಗೆ ಆಶ್ರಯ, ವಾಜಪೇಯಿ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಯಾವುದೇ ಸಂಘ, ಸಂಸ್ಥೆಗಳು ಸ್ವಚ್ಛತಾ ಕಾರ್ಯ ವಹಿಸಿಕೊಂಡರೆ 32 ಮಂದಿ ಸ್ವಚ್ಛತಾ ಕಾರ್ಮಿಕರಿಗೆ ವಿಮೆ, ಭವಿಷ್ಯನಿಧಿ, ವೈದ್ಯಕೀಯ ಸೌಲಭ್ಯ, ಕೈಗಳಿಗೆ ಗ್ಲೌಸ್, ಕಾಲಿಗೆ ಶೂ ಹಾಗೂ ಸಮವಸ್ತ್ರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಎಸ್.ಬಿ.ಪುಷ್ಪರಾಜನ್, ನರೇಂದ್ರ, ಮೋನಪ್ಪ, ತಿಪ್ಪೇಶ್ ಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.