ರಾಜರಾಜೇಶ್ವರಿನಗರ:ಘನ ತ್ಯಾಜ್ಯ ವಿಲೇವಾರಿ ಮಾಡುವ ಲಾರಿಗಳಿಗೆ ಡೀಸೆಲ್ ತುಂಬಿಸಲು ಪಾಲಿಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಲಾರಿ ಚಾಲಕರು ಮತ್ತು ಸಿಬ್ಬಂದಿ ಕಸದ ಕಂಟೇನರ್ಗಳನ್ನು ರಾಜರಾಜೇಶ್ವರಿ ನಗರ ವಲಯದ ಕಚೇರಿ ಮುಂಭಾಗ ಇಟ್ಟು ಪ್ರತಿಭಟನೆ ನಡೆಸಿದರು.
‘ಪಾಲಿಕೆಯ ಕೊಟ್ಟಿಗೇಪಾಳ್ಯ ವಾರ್ಡ್ನಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಲಾರಿಗಳಿಗೆ ಕಳೆದ 4 ತಿಂಗಳಿನಿಂದ ಅಧಿಕಾರಿಗಳು ಡೀಸೆಲ್ ತುಂಬಿಸಲು ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದಾರೆ. ಗುತ್ತಿಗೆದಾರರಿಗೆ ತಕ್ಷಣ ಹಣ ಬಿಡುಗಡೆ ಮಾಡುವ ರಾಜರಾಜೇಶ್ವರಿ ನಗರ ವಲಯ ಕಚೇರಿಯ ಸಹಾಯಕ ಹಣಕಾಸು ನಿಯಂತ್ರಣಾಧಿಕಾರಿಯು, ಪಾಲಿಕೆ ವಾಹನಗಳಿಗೆ ಮಾತ್ರ ಹಣ ಪಾವತಿಸಲು ವಿಳಂಬ ಮಾಡುತ್ತಿದ್ದಾರೆ’ ಎಂದು ಅವರು ದೂರಿದರು.
ಸಿಬ್ಬಂದಿಯ ಸಂಬಳ ಪಾವತಿಸಲು ಸಹ ವಿಳಂಬ ಮಾಡಲಾಗುತ್ತಿದೆ. ಹೆಚ್ಚುವರಿ ಆಯುಕ್ತರ ಆದೇಶಕ್ಕೂ ಮನ್ನಣೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.‘ಕೇಂದ್ರ ಕಚೇರಿಯ ಮುಖ್ಯ ಹಣಕಾಸು ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಹಣ ಬಿಡುಗಡೆ ಮಾಡಿಸಲಾಗುವುದು’ ಎಂದು ಹೆಚ್ಚುವರಿ ಆಯುಕ್ತ ಕೆ.ಎಂ.ರಾಮಚಂದ್ರನ್ ಭರವಸೆ ನೀಡಿದ್ದಾರೆ.