ಬೆಂಗಳೂರು: `ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆಯಾಗಲು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬಹುಮತವನ್ನು ನೀಡಿ ಬೆಂಬಲಿಸಬೇಕು' ಎಂದು ಶ್ರೀ ಸಾಮಾನ್ಯರ ಮತದಾನ ವೇದಿಕೆಯು ಹೇಳಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪರವಾಗಿ ಮಾತನಾಡಿದ ಸಾಹಿತಿ ಯು.ಆರ್.ಅನಂತಮೂರ್ತಿ ಅವರು, `ರಾಜ್ಯದಲ್ಲಿನ ಇದುವರೆಗಿನ ಆಡಳಿತವನ್ನು ನೋಡಿದರೆ ಕಾಂಗ್ರೆಸ್ ಪಕ್ಷವೇ ರಾಜ್ಯದ ಜನತೆಗೆ ಸ್ವಲ್ಪ ಉತ್ತಮ ಆಡಳಿತವನ್ನು ನೀಡಿದೆ ಎಂದು ಹೇಳಬಹುದು. ಬಿಜೆಪಿ ಸರ್ಕಾರವಿದ್ದಾಗ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಯಿತು. ಒಂದು ರಾಜಕೀಯ ಪಕ್ಷಕ್ಕಿರಬೇಕಾದ ಯಾವುದೇ ಬದ್ಧತೆಯೂ ಬಿಜೆಪಿ ಪಕ್ಷಕ್ಕಿಲ್ಲ' ಎಂದು ಆರೋಪಿಸಿದರು.
`ಬೇರೆ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ಪಕ್ಷವೇ ಉತ್ತಮವಾಗಿದೆ. ಅದು ಕೋಮುವಾದದ ಬಗ್ಗೆ ಸ್ಪಷ್ಟ ನಿಲುವನ್ನಾದರೂ ಹೊಂದಿದೆ. ಇದರಿಂದ ರಾಜ್ಯದ ಜನತೆಯು ಕಾಂಗ್ರೆಸ್ ಪಕ್ಷಕ್ಕೆ ಬಹುಮತವನ್ನು ನೀಡುವ ಮೂಲಕ ರಾಜ್ಯಕ್ಕೆ ಸುಭದ್ರ ಸರ್ಕಾರವನ್ನು ನೀಡಬೇಕು' ಎಂದರು.
`ಅಭಿವೃದ್ಧಿಪರ, ನ್ಯಾಯಯುತ ಸರ್ಕಾರದ ರಚನೆಗಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು' ಎಂದರು.
ಸಾಹಿತಿಗಳಾದ ಪ್ರೊ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರುದ್ರಪ್ಪ ಹನಗವಾಡಿ ಅವರು ಮಾತನಾಡಿದರು.