ನವದೆಹಲಿ (ಪಿಟಿಐ): ಅಸ್ಸಾಂನ ಬಾರ್ಪೆಟ್ನ ದೇವಾಲಯ ಪ್ರವೇಶಿಸದಂತೆ ತನ್ನನ್ನು ಆರ್ಎಸ್ಎಸ್ ಕಾರ್ಯಕರ್ತರು ತಡೆದರು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿಯ ಈ ಶೈಲಿಯ ರಾಜಕಾರಣ ಸ್ವೀಕಾರಾರ್ಹವಲ್ಲ ಎಂದೂ ರಾಹುಲ್ ಟೀಕಿಸಿದರು. ಆದರೆ ರಾಹುಲ್ ಆರೋಪವನ್ನು ಬಿಜೆಪಿ ಅಲ್ಲಗೆಳೆದಿದೆ. ಪಂಜಾಬ್ನಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸಂಸತ್ ಭವನದ ಹೊರಗೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ವೇಳೆ ರಾಹುಲ್ ಈ ಬಗ್ಗೆ ಮಾತನಾಡಿದರು.
‘ಅಸ್ಸಾಂ ಪ್ರವಾಸದಲ್ಲಿದ್ದಾಗ ನಾನು ಅಲ್ಲಿನ ದೇವಾಲಯವೊಂದಕ್ಕೆ ಭೇಟಿ ನೀಡಲು ಬಯಸಿದ್ದೆ. ಆದರೆ ದೇವಾ ಲಯದ ದ್ವಾರದಲ್ಲಿ ನಿಂತಿದ್ದ ಆರ್ಎಸ್ಎಸ್ ಕಾರ್ಯಕರ್ತರು ಒಳಗೆ ಪ್ರವೇಶಿಸದಂತೆ ನನ್ನನ್ನು ತಡೆದರು. ಬಾಗಿಲಿನಲ್ಲಿ ನನಗೆ ತಡೆಯಾಗಿ ಮಹಿಳೆಯರನ್ನು ನಿಲ್ಲಿಸಿ, ನೀವು ಒಳಗೆ ಹೋಗುವಂತಿಲ್ಲ ಎಂದರು. ಬಿಜೆಪಿ ಇಂತಹ ಕೆಲಸಗಳನ್ನೇ ಮಾಡುತ್ತದೆ’ ಎಂದು ಆರೋಪಿಸಿದರು.
‘ರಾಹುಲ್ ಗಾಂಧಿ ಅವರು ದೇವಾ ಲಯಕ್ಕೆ ಪ್ರವೇಶಿಸಲು ಅವಕಾಶ ನೀಡು ವುದಿಲ್ಲ ಎಂದು ಬಾರ್ಪೆಟ್ನ ವೈಷ್ಣವ ಮಂದಿರದ ಮುಖ್ಯಸ್ಥರು ನನಗೆ ಹೇಳಿದ್ದರು’ ಎಂದು ಅಸ್ಸಾಂ ಮುಖ್ಯ ಮಂತ್ರಿ ತರುಣ್ ಗೋಗೊಯ್ ಭಾನುವಾರ ಹೇಳಿದ್ದರು.
*
ರಾಹುಲ್ ಸುಳ್ಳಿನ ಯಂತ್ರ
ಸಂಸತ್ತಿನ ಕಲಾಪವನ್ನು ಹಾಳು ಮಾಡುವ ಉದ್ದೇಶದಿಂದಲೇ ಕಾಂಗ್ರೆಸ್ ಸಣ್ಣ ವಿಚಾರಗಳನ್ನು ದೊಡ್ಡದು ಮಾಡುತ್ತಿದೆ ಎಂದು ಬಿಜೆಪಿ ಟೀಕಿಸಿದೆ.
‘ಕಾಂಗ್ರೆಸ್ ಆಡಳಿತ ಇರುವ ರಾಜ್ಯದ ದೇವಾಲಯದಲ್ಲಿ ಪ್ರವೇಶ ಸಿಗಲಿಲ್ಲ ಎಂದರೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ನಿಜಕ್ಕೂ ನಾಚಿಕೆಯಾಗಬೇಕು’ ಎಂದು ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ವ್ಯಂಗ್ಯವಾಡಿದ್ದಾರೆ. ಸಚಿವ ವೆಂಕಯ್ಯ ನಾಯ್ಡು, ‘ಜನರ ಹಾದಿ ತಪ್ಪಿಸುವ ಸಲುವಾಗು ತಪ್ಪು ಸಂದೇಶಗ ಹರಡುವ ಹವ್ಯಾಸ ಈ ನಡುವೆ ಹೆಚ್ಚಾಗಿದೆ’ ಎಂದಿದ್ದಾರೆ.