ಬೆಂಗಳೂರು: ಕರಕುಶಲ ಕಲಾ ಮಾಸಾಚರಣೆ ಅಂಗವಾಗಿ `ಸೆಂಟ್ರಲ್ ಕಾಟೇಜ್ ಎಂಪೋರಿಯಂ' (ಸಿಸಿಐಇ) ನಗರದಲ್ಲಿ ಮಾರ್ಚ್ 27ರವರೆಗೆ `ಕರಕುಶಲ ಕಲಾ ವಸ್ತು ಪ್ರದರ್ಶನ'ವನ್ನು ಆಯೋಜಿಸಿದೆ. ಬುಧವಾರದಿಂದಲೇ ಮಹಾತ್ಮಾಗಾಂಧಿ ರಸ್ತೆ ಹಾಗೂ ಎಚ್ ಎಸ್ ಆರ್ ಲೇಔಟ್ನಲ್ಲಿರುವ ಎಂಪೋರಿಯಂನ ಎರಡೂ ಮಳಿಗೆಗಳಲ್ಲಿ ವಸ್ತು ಪ್ರದರ್ಶನ ಬುಧವಾರ ಪ್ರಾರಂಭವಾಯಿತು.
ಪ್ರದರ್ಶನದಲ್ಲಿ ಬುಡಕಟ್ಟು (ಡೋಕ್ರಾ) ವಿನ್ಯಾಸವಿರುವ ಲೋಹದ ಕಲಾಕೃತಿಗಳು, ಪೀಠೋಪಕರಣಗಳು ಆಕರ್ಷಣೆಯ ಕೇಂದ್ರ ಬಿಂದು. ಇಲ್ಲಿ ರೂ. 30 ರಿಂದ 7 ಲಕ್ಷದ ವರೆಗೆ ಎಲ್ಲಾ ರೀತಿ ಕಲಾಕೃತಿಗಳು ಲಭ್ಯವಿದೆ. ಅದರಲ್ಲಿ ಪೀಠೋಪಕರಣಗಳು ಹಾಗೂ ರತ್ನಗಂಬಳಿಗಳ ಮೇಲೆ ಶೇ 10 ರಷ್ಟು ವಿಶೇಷ ರಿಯಾಯಿತಿ ಲಭ್ಯವಿದೆ.
ದೇಶದ ವಿವಿಧ ಭಾಗಗಳಲ್ಲಿ ತಯಾರಿಸಿರುವ ಸಾಂಪ್ರದಾಯಿಕ ಹಾಗೂ ನವೀನ ಕೆತ್ತನೆಗಳನ್ನು ಒಳಗೊಂಡಿರುವ ಮರ ಹಾಗೂ ಲೋಹದ ಕಲಾಕೃತಿಗಳು, ಪೀಠೋಪಕರಣಗಳು, ರತ್ನಗಂಬಳಿಗಳು, ಗೃಹಾಲಂಕಾರದ ವಸ್ತುಗಳು ಸೇರಿದಂತೆ ಅಪರೂಪದ ಕರಕುಶಲ ಕಲಾಕೃತಿಗಳ ಸಂಗ್ರಹವನ್ನು ಪ್ರದರ್ಶನದಲ್ಲಿ ಕಾಣಬಹುದು.
ಮಹಾತ್ಮಗಾಂಧಿ ರಸ್ತೆಯ್ಲ್ಲಲಿ ಇರುವ ಎಂಪೋರಿಯಂನಲ್ಲಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಚಿತ್ರನಟಿ ರಾಶ್ರೀ ಪೊನ್ನಪ್ಪ , `ದೇಶದ ಸಾಂಪ್ರದಾಯಿಕ ಕಲೆಯನ್ನು ಉಳಿಸುವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ. ಯುವಜನತೆ ಹೆಚ್ಚು ಹೆಚ್ಚು ಕರಕುಶಲ ವಸ್ತುಗಳನ್ನು ಖರೀದಿಸುವ ಮೂಲಕ ಕರಕುಶಲಕರ್ಮಿಗಳಿಗೆ ಪೋತ್ಸಾಹ ನೀಡಬೇಕು' ಎಂದು ಹೇಳಿದರು.
ನಂತರ ಎಂಪೋರಿಯಂನ ಹೆಚ್ಚುವರಿ ವ್ಯವಸ್ಥಾಪಕ ನಿರ್ದೇಶಕ ಎನ್. ಮುಖರ್ಜಿ ಮಾತನಾಡಿದರು.
`ಎಂಪೋರಿಯಂ, ಕರಕುಶಲಕರ್ಮಿಗಳಿಂದ ನೇರವಾಗಿ ಕಲಕೃತಿಗಳನ್ನು ಖರೀದಿ ಮಾಡುತ್ತದೆ. ಇದರಿಂದ ಅವರಿಗೆ ನ್ಯಾಯವಾದ ಬೆಲೆ ಸಿಗುತ್ತದೆ. ಹಾಗೆ ಇವುಗಳನ್ನು ಕೊಳ್ಳುವ ಗ್ರಾಹಕರಿಗೆ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ಕೊಡುವುದು ಈ ಪ್ರದರ್ಶನದ ಉದ್ದೇಶ' ಎಂದು ಹೇಳಿದರು.
ಈ ಬಾರಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರದರ್ಶನದ ಸಮಯವನ್ನು ಬೆಳಿಗ್ಗೆ 10 ರಿಂದ ರಾತ್ರಿ 8.30ರವರೆಗೆ ನಿಗದಿ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.