ಹುಣಸೂರು: ತಾಲ್ಲೂಕಿನ ಹನಗೋಡು ಹೋಬಳಿ ಕರ್ಣಕುಪ್ಪೆ ಗ್ರಾ.ಪಂ ವ್ಯಾಪ್ತಿ ಉಡುವೇಪುರ ಗ್ರಾಮದ ರೈತ ರಾಜಶೇಖರ್, ರಾಮಚಂದ್ರ ಮತ್ತು ಮಹೇಂದ್ರ ಅವರು ಬೆಳೆದಿದ್ದ ಶುಂಠಿ ಮತ್ತು ಮುಸುಕಿನ ಜೋಳ ಫಸಲಿನ ಮೇಲೆ ಮಂಗಳವಾರ ರಾತ್ರಿ ಕಾಡಾನೆ ದಾಳಿಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ವೀರನಹೊಸಹಳ್ಳಿ ಕಾಡಂಚಿನ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸದೆ ಕಾಡಂಚಿನ ಪ್ರದೇಶದ ರೈತ ಬೆಳೆಯುವ ಫಸಲು ಕೈಸೇರುತ್ತಿಲ್ಲ ಎಂದಿದ್ದಾರೆ. ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೆ ಕಾಲ ವ್ಯಯ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
20- 25 ಎಕರೆ ಪ್ರದೇಶದಲ್ಲಿ ಬೆಳೆದ ಫಸಲು ಬಹುತೇಕ ಕಠಾವಿಗೆ ಬಂದಿದ್ದು, ಅಂತಿಮ ಹಂತದಲ್ಲಿ ಕಾಡಾನೆ ದಾಳಿಗೆ ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ರೈತ ರಾಜಶೇಖರ್ ತಿಳಿಸಿದರು. ಅರಣ್ಯ ಇಲಾಖೆ ಕಾಡು ಪ್ರಾಣಿ ದಾಳಿಯಲ್ಲಿ ನಾಶಗೊಂಡ ಫಸಲಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ.
ಸರ್ಕಾರ, ವಿಜಯಶಂಕರ್ ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಪರಿಹಾರದ ಮೊತ್ತ ಹೆಚ್ಚಿಸಿತ್ತಾದರೂ ಈವರಗೆ ರೈತನ ಕೈ ಸೇರಿಲ್ಲ ಎಂದು ಕಾಡಂಚಿನ ರೈತರು ಆರೋಪಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ವನಪಾಲಕ ಶಿವಕುಮಾರ್ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.