ಮಾಗಡಿ: ಎಲ್ಲರಿಗೂ ಕಾನೂನಿನ ಸರಳ ತಿಳಿವಳಿಕೆ ಇದ್ದರೆ ಮಾತ್ರ ಜೀವನ ಸುಲಲಿತವಾಗಿ ನಡೆಯುತ್ತದೆ ಎಂದು ನ್ಯಾಯಾಧೀಶರಾದ ಮಾಲಾ ನುಡಿದರು.
ನ್ಯಾಯಾಲಯದ ಆವರಣದಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ನಡೆದ ಕಾನೂನು ಸಾಕ್ಷರತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾ.ಪಂನ ಕಾರ್ಯದರ್ಶಿಗಳು ಕಡ್ಡಾಯವಾಗಿ ಕಾನೂನು ಸಾಕ್ಷರತಾ ಶಿಬಿರಗಳಲ್ಲಿ ಭಾಗವಹಿಸಬೇಕು. ಜನರ ನಡುವೆ ಇದ್ದು ಜನರ ಸೇವೆ ಮಾಡುವಾಗ ಸರಳವಾದ ಕಾನೂನಿನ ತಿಳಿವಳಿಕೆಯಿದ್ದರೆ ಸಣ್ಣ, ಪುಟ್ಟ ವ್ಯಾಜ್ಯಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಅನುಕೂಲವಾಗುತ್ತದೆ. ಗ್ರಾ.ಪಂಗೆ ಸೇರಿದ ದಾಖಲಾತಿಗಳನ್ನು ಕಾನೂನು ರೀತಿಯಲ್ಲಿ ನಿರ್ವಹಿಸಲು ಸರಳ ಕಾನೂನು ಅರಿವು ಅನುವು ಮಾಡಿಕೊಡುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಜಿ.ಪಾಪಣ್ಣ ಮಾತನಾಡಿ, ಮುಗ್ಧ ಜನರು ಕಾನೂನಿನ ಅರಿವು ಇಲ್ಲದೆ ಅನೇಕ ಆತಂಕಗಳನ್ನು ಎದುರಿಸುತ್ತಾರೆ. ಅನಕ್ಷರಸ್ಥರೂ ಸಹ ಕಾನೂನಿನ ತಿಳಿವಳಿಕೆಯನ್ನು ಬೆಳೆಸಿಕೊಳ್ಳಲು ಸಾಕ್ಷರತಾ ಶಿಬಿರಗಳಲ್ಲಿ ಭಾಗವಹಿಸಬೇಕು. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಬಡ ಜನರಿಗೆ ಮನವರಿಕೆ ಮಾಡಬೇಕಾಗಿರುವುದು ಇಂದು ತೀರಾ ಅಗತ್ಯವಾಗಿದೆ ಎಂದರು.
ತಾಲ್ಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಡಿ.ಎಚ್.ಮಲ್ಲಿಕಾರ್ಜುನಯ್ಯ, ವಕೀಲರ ಸಂಘದ ಕಾರ್ಯದರ್ಶಿ ಮುನಿಸ್ವಾಮಿ ನಾಯ್ಕ, ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಎಂ.ಎಸ್.ಸಿದ್ದಲಿಂಗಪ್ಪ, ವಕೀಲರಾದ ಎಸ್.ಜಿ.ರಾಜಯ್ಯ, ಕೆ.ಎಸ್.ಪ್ರಕಾಶ್, ಪ್ರಸಾದ್, ನಾಗೇಶ್ ಮಾತನಾಡಿದರು.
ಸರ್ಕಾರಿ ವಕೀಲರಾದ ಲತಾ, ಶಿರಸ್ತೇದಾರ್ ಕುಂಟಯ್ಯ, ನಿವೃತ್ತ ಶಿಕ್ಷಕ ರೇಣುಕಪ್ಪ ಇತರರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಬೆರಳೆಣಿಕೆಯಷ್ಟು ಗ್ರಾ.ಪಂ ಕಾರ್ಯದರ್ಶಿಗಳು ಭಾಗವಹಿಸ್ದ್ದಿದುದು ಎದ್ದು ಕಾಣುತ್ತಿತ್ತು.