ಶಿರಸಿ: ರಾಜ್ಯದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಹತ್ತು ಲಕ್ಷ ಪ್ರಕರಣಗಳ ವಿಚಾರಣೆ ಬಾಕಿ ಇದ್ದು, ಕಾನೂನು ನ್ಯಾಯ ವಿಳಂಬವಾಗುವದರಿಂದ ರಾಜೀಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಚನ್ನಕೇಶವ ಎನ್.ಆರ್. ಹೇಳಿದರು.
ಕಾನೂನು ಸಾಕ್ಷರತಾ ರಥ ತಾಲ್ಲೂಕಿನ ಬಿಸಲಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಿದ್ದ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವ್ಯಕ್ತಿ ಕಾನೂನು ಜ್ಞಾನ ಪಡೆದುಕೊಳ್ಳಬೇಕು. ಕಾನೂನು ಮನುಷ್ಯನ ಜೀವನದ ಅಂಗವಾಗಿದ್ದು, ಕಾನೂನಿನ ಮೂಲಕ ಸಾಮಾಜಿಕ ನ್ಯಾಯ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿವಿಲ್ ನ್ಯಾಯಾಧೀಶ ಪ್ರಕಾಶ ವಿ., ಮನುಷ್ಯನ ಸಾರ್ವತ್ರಿಕ ಜೀವನದಲ್ಲಿ ಕಾನೂನಿನ ಪ್ರಜ್ಞೆ ಅಗತ್ಯವಾಗಿದೆ ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸಿದ್ಧರಾಮ ಟಿ.ಪಿ., ತಹಸೀಲ್ದಾರ ರುದ್ರೇಶ, ವಕೀಲರ ಸಂಘದ ಅಧ್ಯಕ್ಷ ಎ. ರವೀಂದ್ರ ನಾಯ್ಕ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಸತೀಶ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಶೋಭಾ ಗೌಡ, ಉಪಾಧ್ಯಕ್ಷ ರಮೇಶ ಹೆಗಡೆ, ತಾ.ಪಂ. ಸದಸ್ಯ ಸುನೀಲ ನಾಯ್ಕ ಉಪಸ್ಥಿತರಿದ್ದರು.
ಅರಣ್ಯ ಹಕ್ಕುಗಳ ಕಾಯಿದೆ ಕುರಿತು ವಕೀಲ ಸುಭಾಷ ಕೈರನ್, ಕ್ರಿಮಿನಲ್ ಪ್ರಕರಣದಲ್ಲಿ ನೊಂದವರಿಗೆ ಸಿಗುವ ಪರಿಹಾರದ ಕುರಿತು ವಕೀಲ ಬಸವರಾಜ ದೊಡ್ಡಮನಿ ಉಪನ್ಯಾಸ ನೀಡಿದರು. ಶ್ರೀಪಾದ ನಾಯ್ಕ ಸ್ವಾಗತಿಸಿದರು. ಜಿ.ಕೆ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಲೋಹಿತ ವಂದಿಸಿದರು.
ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘಗಳು ವಿವಿಧ ಇಲಾಖೆ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಅಭಿಯಾನಕ್ಕೆ ಬಿಸಲಕೊಪ್ಪದಲ್ಲಿ ಡೊಳ್ಳು ಕುಣಿತ, ಪೂರ್ಣಕುಂಭದೊಂದಿಗೆ ಸಂಭ್ರಮದಿಂದ ಸ್ವಾಗತಿಸಲಾಯಿತು.
ಈ ಕಾರ್ಯಕ್ರಮದ ಪೂರ್ವ ನಗರದ ನ್ಯಾಯಾಲಯ ಆವಾರದಲ್ಲಿ ನ್ಯಾಯಾಧೀಶ ಚನ್ನಕೇಶವ ಎನ್.ಆರ್. ಹಸಿರು ನಿಶಾನೆ ತೋರುವ ಮೂಲಕ ಕಾನೂನು ಸಾಕ್ಷರತಾ ರಥ ಅಭಿಯಾನಕ್ಕೆ ಚಾಲನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.