ತುರುವೇಕೆರೆ: ರಾಜ್ಯ ಸರ್ಕಾರದ 50:54 ಲೆಕ್ಕಪತ್ರ ಶೀರ್ಷಿಕೆಯಡಿ ರಸ್ತೆ ಅಭಿವೃದ್ಧಿಗೆ ನೀಡಲಾಗುವ ಅನುದಾನ ಹಾಗೂ ಸಿಆರ್ಎಫ್ ಯೋಜನೆಯಡಿ 2013:-14ನೇ ಸಾಲಿಗೆ ತಾಲ್ಲೂಕಿಗೆ ಯಾವುದೇ ಕಾಮಗಾರಿ ಮಂಜೂರಾಗದಿರುವ ಬಗ್ಗೆ ವಿವಿಧ ಪಕ್ಷಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗೆ ಮುತ್ತಿಗೆ ಹಾಕಿ ವಾಗ್ವಾದ ನಡೆಸಿದರು.
2013–-14ನೇ ಸಾಲಿನ 50:54 ಲೆಕ್ಕಪತ್ರ ಶೀರ್ಷಿಕೆಯಡಿ ಮತ್ತು ಸಿಆರ್ಎಫ್ ಯೋಜನೆಯಡಿ ತಾಲ್ಲೂಕಿನ ಯಾವುದೇ ಹೋಬಳಿಗೆ ಒಂದೇ ಒಂದು ರಸ್ತೆ ಕಾಮಗಾರಿಯೂ ಮಂಜೂರಾಗಿಲ್ಲ. ತುರುವೇಕೆರೆ ವಿಧಾನಸಭೆ ಕ್ಷೇತ್ರಕ್ಕೆ ಸಿಆರ್ಎಫ್ ಯೋಜನೆಯಡಿ ಒಟ್ಟು ₨ 13.5 ಕೋಟಿ ಮೊತ್ತದ ಕಾಮಗಾರಿಗಳು ಮಂಜುರಾಗಿವೆ. ಆದರೆ ಇವೆಲ್ಲ ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ವ್ಯಾಪ್ತಿಗೆ ಸೇರುತ್ತವೆ ಎಂದು ದೂರಿದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಸೋಲೊಪ್ಪಿದ ಗೀತಾ ರಾಜಣ್ಣ ರಾಜ್ಯ ಕಾಂಗ್ರೆಸ್ ಮುಖಂಡರನ್ನು ಹಾಗೂ ಸಚಿವರನ್ನು ದಿಕ್ಕು ತಪ್ಪಿಸಿ ತಾಲ್ಲೂಕಿಗೆ ಅನ್ಯಾಯ ಮಾಡಿದ್ದಾರೆ.
ಇಲಾಖೆ ಈ ಕೂಡಲೇ ತಾಲ್ಲೂಕಿನ 4 ಹೋಬಳಿಯ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಸಬೇಕು ಎಂದು ತಾ.ಪಂ. ಅಧ್ಯಕ್ಷ ಲಕ್ಷ್ಮೀಕಾಂತ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎನ್.ಶಿವರಾಜ್ ಒತ್ತಾಯಿಸಿದರು.
ಇದಕ್ಕೆ ಸ್ಪಷ್ಟೀಕರಣ ನೀಡಿದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ದಯಾನಂದ್ ತಾಲ್ಲೂಕು ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗಾಗಿ ₨ 10.5 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ಪೈಕಿ ಯಾವುದೇ ರಸ್ತೆ ಕಾಮಗಾರಿಯೂ ಮಂಜೂರಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಪರಿಹಾರ ವಿಳಂಬ: ಖಂಡನೆ
ತುಮಕೂರು: ಕಳೆದ ಸೆಪ್ಟೆಂಬರ್ನಲ್ಲಿ ಸುರಿದ ಮಳೆಯಿಂದ ಹಾನಿಗೊಳಗಾದ ಮನೆ ಮಾಲೀಕರಿಗೆ ಶೀಘ್ರ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ಹಾನಿ ಸಂಭವಿಸಿ ನಾಲ್ಕು ತಿಂಗಳು ಕಳೆದರೂ; ನಗರಸಭೆ ಆಡಳಿತ ಪರಿಹಾರ ಬಿಡುಗಡೆ ಮಾಡಿಲ್ಲ. ಬಡವರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈಗಲಾದರೂ ಸಂಬಂಧಪಟ್ಟವರು ಬಡವರಿಗೆ ಆಸರೆ ಒದಗಿಸಬೇಕು ಎಂದು ಸಮಿತಿಯ ನಗರ ಸಂಚಾಲಕ ವಿ.ಗೋಪಾಲ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.