ನವದೆಹಲಿ (ಪಿಟಿಐ): ಕಾಮನ್ವೆಲ್ತ್ ಕ್ರೀಡಾಕೂಟ (ಸಿಡಬ್ಲುಜಿ) ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಐವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ದೆಹಲಿ ನ್ಯಾಯಾಲಯ, ದಿನನಿತ್ಯವೂ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿದೆ.
`ಸಿಡಬ್ಲುಜಿ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಲಿತ್ ಭಾನೋಟ್, ಜಂಟಿ ಪ್ರಧಾನ ನಿರ್ದೇಶಕ (ಕ್ರೀಡೆ) ಎ.ಎಸ್.ವಿ.ಪ್ರಸಾದ್, ಮಾಜಿ ಪ್ರಧಾನ ನಿರ್ದೇಶಕ (ನೇಮಕಾತಿ) ಸುರ್ಜಿತ್ ಲಾಲ್, ಮಾಜಿ ಖಜಾಂಚಿ ಎಂ.ಜಯಚಂದ್ರನ್ ಹಾಗೂ ಹೈದರಾಬಾದ್ ಮೂಲದ ಎಕೆಆರ್ ಕನ್ಸ್ಸ್ಟ್ರಕ್ಷನ್ಸ್ ಪ್ರವರ್ತಕ ಎ.ಕೆ.ರೆಡ್ಡಿ ಅವರ ಜಾಮೀನು ಅರ್ಜಿಗಳನ್ನು ವಜಾ ಮಾಡಲಾಗಿದೆ~ ಎಂದು ವಿಶೇಷ ನ್ಯಾಯಾಧೀಶ ತಲ್ವಂತ್ ಸಿಂಗ್ ಹೇಳಿದರು.
ಈ ಆದೇಶದಿಂದ ಕಳವಳಗೊಂಡ ವಕೀಲರು, 2ಜಿ ತರಂಗಾಂತರ ಹಂಚಿಕೆಯಂಥ ಪ್ರಕರಣಗಳೂ ಇರುವುದರಿಂದ ದಿನಚರಿಗೆ ಹೊಂದಿಕೊಳ್ಳುವುದು ಕಷ್ಟ ಎಂದು ಹೇಳಿದರು.
`ದಾಖಲೆಗಳ ಪರಿಶೀಲನೆ ಆದ ಬಳಿಕ, ದಿನಚರಿಗೆ ಹೊಂದಿಕೊಳ್ಳಲು ಸೂಕ್ತ ಸಮಯ ನೀಡಲಾಗುತ್ತದೆ ಮತ್ತು ಪ್ರತಿದಿನವೂ ಪ್ರಕರಣದ ವಿಚಾರಣೆ ನಡೆಸಲಾಗುತ್ತದೆ. ನೀವು ಹೊಂದಿಕೊಳ್ಳದೇ ವಿಧಿ ಇಲ್ಲ~ ಎಂದು ಹೇಳಿದರು.
ಕೋರ್ಟ್ ನಕಾರ: ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸ್ವಿಟ್ಜರ್ಲೆಂಡ್ ಮೂಲದ ಸ್ವಿಸ್ ಟೈಮಿಂಗ್ ಸಂಸ್ಥೆ ವಿರುದ್ಧ ಸಂಭವನೀಯ ಕ್ರಮವನ್ನು ನಿರ್ಬಂಧಿಸಲು ಇದೇ ಸಂದರ್ಭದಲ್ಲಿ ಕೋರ್ಟ್ ನಿರಾಕರಿಸಿದೆ.
ವಿಚಾರಣಾ ನ್ಯಾಯಾಲಯ ಜರುಗಿಸಬಹುದಾದ ಕ್ರಮಕ್ಕೆ ತಡೆ ನೀಡಲಾಗದು. ಅಲ್ಲದೆ ಈ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಗಳ ವಿವರ ಒಳಗೊಂಡ ವಸ್ತುಸ್ಥಿತಿ ವರದಿಯನ್ನು ಎರಡು ವಾರಗಳಲ್ಲಿ ಸಲ್ಲಿಸಬೇಕು ಎಂದು ಅದು ಸಿಬಿಐಗೆ ಸೂಚಿಸಿದೆ. ಕೆಳ ನ್ಯಾಯಾಲಯ ತನ್ನ ವಿರುದ್ಧ ತೆಗೆದುಕೊಳ್ಳಬಹುದಾದ ಬಲಪ್ರಯೋಗದ ಕ್ರಮಗಳಿಗೆ ತಡೆ ನೀಡುವಂತೆ ಕೋರಿ ಸ್ವಿಸ್ ಟೈಮಿಂಗ್, ಕೋರ್ಟ್ಗೆ ಮನವಿ ಸಲ್ಲಿಸಿತ್ತು. ವಿದೇಶಿ ಕಂಪೆನಿಗಳಿಗೆ ಸಂಬಂಧಿಸಿದ ಕಾನೂನು ಪ್ರಕಾರ ತನಗೆ ಸಮನ್ಸ್ ನೀಡಲಾಗಿಲ್ಲ ಎಂದು ಅದು ಆರೋಪಿಸಿತ್ತು.