ರಾಮನಗರ: ಔಷಧ ಸೇವನೆ ಆರಂಭಿಸಿದ ತಕ್ಷಣ, ಕಾಯಿಲೆ ವಾಸಿಯಾಗಬೇಕೆಂಬ ಮನಃಸ್ಥಿತಿಯಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗುವ ಸಾಧ್ಯತೆ ಇರುತ್ತದೆ ಎಂದು ನಿಮ್ಹಾನ್ಸ್ನ ಹಿರಿಯ ಮನೋವೈದ್ಯ ಡಾ ಸಿ.ಆರ್. ಚಂದ್ರಶೇಖರ್ ಅಭಿಪ್ರಾಯಪಟ್ಟರು.
ರಾಮನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿಕಿತ್ಸೆ ಪಡೆಯುವಾಗ ಶ್ರದ್ಧೆ ಅವಶ್ಯಕ. ಔಷಧಗಳನ್ನು ಸರಿಯಾದ ರೀತಿಯಲ್ಲಿ ಸೇವಿಸುವುದರಿಂದ ರೋಗಗಳು ನಿವಾರಣೆಯಾಗುತ್ತವೆ. ದೇಹದ ಯಾವುದೇ ರೋಗವು ಹಂತ ಹಂತವಾಗಿ ಇಳಿಮುಖವಾಗುತ್ತದೆ ಎಂದು ತಿಳಿಸಿದರು.
ಶಿಬಿರಾರ್ಥಿಗಳು ಧ್ಯಾನ ಮತ್ತು ಯೋಗದ ಮೂಲಕ ಚಿಕಿತ್ಸೆ ಸಮರ್ಪಕವಾಗುವಂತೆ ನೋಡಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಡಾ ಸಿ. ಆರ್. ಚಂದ್ರಶೇಖರ್ ಶಿಬಿರದಲ್ಲಿ ಪಾಲ್ಗೊಂಡಿದ್ದ 75 ಶಿಬಿರಾರ್ಥಿಗಳಿಗೆ ಮಾನಸಿಕ ಚಿಕಿತ್ಸೆಯನ್ನು ನೀಡಿದರೆ, ಕಿವಿ ಸಂಬಂಧಿತ ಸಮಸ್ಯೆಗಳಿಗೆ ಡಾ. ರಾಜೇಶ್ ಚಿಕಿತ್ಸೆ ನೀಡಿದರು.
ಶಿಬಿರದಲ್ಲಿ ಸುಮಾರು 85ಕ್ಕೂ ಹೆಚ್ಚು ರೋಗಿಗಳು ಭಾಗವಹಿಸಿ ಚಿಕಿತ್ಸೆ ಪಡೆದರು. ಇವರಲ್ಲಿ 28 ಕಣ್ಣಿನ ತೊಂದರೆಗೆ ಒಳಪಟ್ಟ ರೋಗಿಗಳನ್ನು ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಪಶ್ಚಿಮ ವಲಯ ಕಣ್ಣಿನ ಆಸ್ಪತ್ರೆಗೆ ಕಳಿಸಿ ಕೊಡಲಾಯಿತು.
ಶೇಷಗಿರಿ ಅಯ್ಯರ್ ನಿರೂಪಿಸಿದರು. ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ಎಂ.ಸಿ.ರಂಗಸ್ವಾಮಿ ಕಾರ್ಯದರ್ಶಿಗಳಾದ ಪಟೇಲ್ ಸಿ.ರಾಜು, ಆರೋಗ್ಯ ಸಮಿತಿಯ ಅಧ್ಯಕ್ಷ ಬೋರಲಿಂಗೇ ಗೌಡ ಹಾಗೂ ಕಾರ್ಯಕಾರಿ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.
ಭಾರತ ವಿಕಾಸ್ ಪರಿಷತ್ ವಾಲ್ಮೀಕಿ ಶಾಖೆ, `ನೆಮ್ಮದಿ~ ಮಾನಸಿಕ ಆರೋಗ್ಯ ಕೇಂದ್ರ ಮತ್ತು ಪಶ್ಚಿಮ ವಲಯ ಕಣ್ಣಾಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು.