ಬೆಂಗಳೂರು: ರಾಜ್ಯದಲ್ಲಿ 1993–94ರಲ್ಲಿ ಜಾರಿಗೆ ಬಂದ ಸಾಮಾನ್ಯ ಪ್ರವೇಶ ಪರೀಕ್ಷಾ ಪದ್ಧತಿ (ಸಿಇಟಿ) 2002ರವರೆಗೂ ದೇಶಕ್ಕೆ ಮಾದರಿಯಾಗಿತ್ತು. ಆದರೆ, 2002ರಲ್ಲಿ ಟಿಎಂಎ ಪೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಖಾಸಗಿ ಕಾಲೇಜುಗಳ ಮೇಲೆ ಸರ್ಕಾರಕ್ಕೆ ಯಾವುದೇ ಹಿಡಿತ ಇಲ್ಲದಂತಾಯಿತು.
ಖಾಸಗಿ ಕಾಲೇಜುಗಳು ಸರ್ಕಾರಕ್ಕೆ ಸೀಟುಗಳನ್ನು ನೀಡಬೇಕಾಗಿಲ್ಲ. ಆಯಾ ಕಾಲೇಜುಗಳು ಸ್ವತಂತ್ರವಾಗಿ ಸಿಇಟಿ ನಡೆಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದು ಎಂದು 11 ಮಂದಿ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಬಹುಮತದ ಆಧಾರದ ಮೇಲೆ ಹೇಳಿತು.
ಹನ್ನೊಂದು ಮಂದಿ ನ್ಯಾಯಮೂರ್ತಿಗಳ ಪೈಕಿ ಆರು ಮಂದಿ ಆಡಳಿತ ಮಂಡಳಿಗಳ ಪರವಾಗಿ ನಿಲುವು ತಳೆದರೆ, 5 ಮಂದಿ ವಿರುದ್ಧವಾದ ನಿಲುವು ತಳೆದರು. ಅಂತಿಮವಾಗಿ ಬಹುಮತದ ಆಧಾರದ ಮೇಲೆ ತೀರ್ಪು ಹೊರಬಿತ್ತು.
ಆಗಿನಿಂದ ಸರ್ಕಾರ ಪ್ರತಿವರ್ಷ ಖಾಸಗಿ ಕಾಲೇಜುಗಳೊಂದಿಗೆ ಮಾತುಕತೆ ನಡೆಸಿ ಒಂದಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಡಿ ಹಂಚಿಕೆ ಮಾಡುತ್ತಿತ್ತು. ಮಾತುಕತೆ ಮೂಲಕ ಶುಲ್ಕ ನಿಗದಿಯಾಗುತ್ತಿತ್ತು.
ಆದರೆ, ಖಾಸಗಿ ಕಾಲೇಜುಗಳು ಪ್ರತಿ ವರ್ಷ ಹೆಚ್ಚಿನ ಶುಲ್ಕ ನಿಗದಿ ಮಾಡುವಂತೆ ಪಟ್ಟು ಹಿಡಿಯುತ್ತಿದ್ದವು. ಅಲ್ಲದೆ ಸರ್ಕಾರಕ್ಕೆ ಬಿಟ್ಟುಕೊಡುತ್ತಿದ್ದ ಸೀಟುಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿತ್ತು.
ಖಾಸಗಿ ಕಾಲೇಜುಗಳು ಸರ್ಕಾರದ ಮೇಲೆ ಸವಾರಿ ಮಾಡಲು ಹೊರಟಿವೆ. ಸರ್ಕಾರದ ಮಾತನ್ನು ಕೇಳುವುದಿಲ್ಲ ಎಂಬ ಕಾರಣಕ್ಕೆ 2006ರಲ್ಲಿ ಕಾಯ್ದೆ ರೂಪಿಸಿ ಕೆಲವೊಂದು ನಿರ್ಬಂಧ ವಿಧಿಸಲು ಆಗಿನ ಸರ್ಕಾರ ಮುಂದಾಯಿತು.
ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿದ ಈ ಮಸೂದೆಗೆ ರಾಜ್ಯಪಾಲರು ಅಂಗೀಕಾರ ನೀಡುತ್ತಿದ್ದಂತೆಯೇ ಕಾಯ್ದೆ ಆಯಿತು. ಆದರೆ, ಇದರಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಹಾಗೂ ಅನನುಕೂಲವಾದ ಅಂಶಗಳು ಇದ್ದ ಕಾರಣ ತಕ್ಷಣವೇ ಜಾರಿ ಮಾಡದೆ ತಡೆಹಿಡಿಯಲಾಗಿತ್ತು.
ಪ್ರತಿ ವರ್ಷ ಈ ಕಾಯ್ದೆಯನ್ನು ತಡೆಹಿಡಿದು ಪರಸ್ಪರ ಮಾತುಕತೆ ಮೂಲಕವೇ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಮಾಡಲಾಗುತ್ತಿತ್ತು. ಕಳೆದ ವರ್ಷ ಖಾಸಗಿ ಕಾಲೇಜುಗಳು ಶುಲ್ಕ ಹೆಚ್ಚಳಕ್ಕೆ ಪಟ್ಟು ಹಿಡಿದ ಕಾರಣ, ಸರ್ಕಾರ ಕಾಯ್ದೆ ಜಾರಿಗೊಳಿಸುವುದಾಗಿ ಘೋಷಿಸಿತ್ತು.
ಆ ಪ್ರಕಾರ ಕಳೆದ ಜುಲೈನಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಕಾಯ್ದೆ ಜಾರಿಗೆ ಇದ್ದ ತಡೆಯನ್ನು ತೆರವುಗೊಳಿಸಲಾಯಿತು. 2014 – 15ನೇ ಸಾಲಿನಿಂದ ಕಾಯ್ದೆ ಜಾರಿಗೆ ಎರಡು ಸಮಿತಿಗಳನ್ನು ರಚಿಸುವ ಮೂಲಕ ಚಾಲನೆ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.