ಕುಣಿಗಲ್: ಅಗತ್ಯ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಾಲ್ಲೂಕಿನ ಆವರೆಗೆರೆ ಗ್ರಾಮದ ನೇತ್ರಾವತಿ ಡಿಸ್ಟಿಲರೀಸ್ನ ನೌಕರರು ಕರ್ತವ್ಯಕ್ಕೆ ತೆರಳದೆ ಕಾರ್ಖಾನೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
ಡಿಸ್ಟಿಲರೀಸ್ನಲ್ಲಿ 450 ಮಹಿಳೆಯರು 150 ಪುರುಷರು ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಕಾರ್ಮಿಕರಿಗೆ ಉದ್ಯೋಗದ ದಾಖಲೆ ಪತ್ರ, ನಿರ್ದಿಷ್ಟ ವೇತನದ ದಾಖಲೆ ನಮೂದಿಸಲು ನಿರಾಕರಿಸಲಾಗುತ್ತಿದೆ.
ಭವಿಷ್ಯನಿಧಿ ಹಣವನ್ನು ವೇತನದಲ್ಲಿ ಕಡಿತ ಮಾಡುತ್ತಿದ್ದರೂ ಸಂಬಂಧಿಸಿದ ಯಾವುದೇ ಮಾಹಿತಿ ನೀಡುತ್ತಿಲ್ಲ. ಇಎಸ್ಐ ಸೌಲಭ್ಯ ನೀಡುತ್ತಿಲ್ಲ ಎಂದು ದೂರಿದರು.
ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಂದ ಬಹುತೇಕ ಮಹಿಳಾ ಕಾರ್ಮಿಕರು ನಿತ್ಯ ಕರ್ತವ್ಯಕ್ಕೆ ಹಾಜರಾಗುತ್ತಿದ್ದು ಅಗತ್ಯ ವಾಹನ ಸೌಲಭ್ಯ, ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಈ ಸಂಬಂಧ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದೆ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಕಾರ್ಮಿಕ ಮುಖಂಡ ರಮೇಶ್ ತಿಳಿಸಿದರು.
ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರೂ ಜಗ್ಗದ ಕಾರ್ಮಿಕರು ಸೂಕ್ತ ನಿರ್ಧಾರ ಪ್ರಕಟಿಸುವವರೆವಿಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಧರಣಿ ಮುಂದುವರೆಸಿದ್ದಾರೆ.