ನವದೆಹಲಿ, (ಪಿಟಿಐ): ಕಾರ್ಪೊರೇಟ್ ಸಂಸ್ಥೆಗಳು ಮತ್ತು ಉದ್ಯೋಗಿಗಳನ್ನು ಕೂಡ ಲೋಕಪಾಲ ಮಸೂದೆ ವ್ಯಾಪ್ತಿ ಅಡಿ ತರಬೇಕು ಎಂದು ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಅಭಿಪ್ರಾಯಪಟ್ಟಿದೆ.
ಉನ್ನತ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಲೋಕಪಾಲ ವ್ಯಾಪ್ತಿಯ ಅಡಿ ತರಬೇಕು ಎಂಬ ಅಭಿಪ್ರಾಯವನ್ನು ಅದು ಬೆಂಬಲಿಸಿದೆ. ಸಿವಿಸಿ ಮತ್ತು ಲೋಕಪಾಲ ಸಂಸ್ಥೆಗಳ ನಡುವಿನ ಗೊಂದಲ ನಿವಾರಣೆಗೆ ಅವುಗಳ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಸ್ಪಷ್ಟವಾಗಿ ನಿಗದಿಪಡಿಸಬೇಕು ಎಂದು ಸಲಹೆ ನೀಡಿದೆ.
ಸದ್ಯದ ಸ್ಥಿತಿಯಲ್ಲಿ ಖಾಸಗಿ ಕಂಪೆನಿ ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಡೆಯುವ ಅಧಿಕಾರ ಸಿವಿಸಿಗೆ ಇಲ್ಲ. ಅಂತಹ ಪ್ರಕರಣಗಳನ್ನು ಸಿಬಿಐಗೆ ಶಿಫಾರಸು ಮಾಡಲಾಗುವುದು ಎಂದು ಸಿವಿಸಿ ಆಯುಕ್ತ ಪ್ರದೀಪ್ ಕುಮಾರ್ ಹೇಳಿದ್ದಾರೆ.
ರಾಜಕಾರಣಿಗಳ ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಪಾಲ ತನಿಖೆ ನಡೆಸಬಹುದು, ಅವರು ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.