ಕಾವೇರಿ ನದಿ ನೀರು ಹಂಚಿಕೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾರವರು ರಾಜಕೀಯ ಪ್ರಚಾರ ಗಿಟ್ಟಿಸಿಕೊಳ್ಳಲು ಪದೇ ಪದೇ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಇದು ಎಷ್ಟು ಸಮಂಜಸ? ಕಾವೇರಿ ಪ್ರಾಧಿಕಾರ, ಸುಪ್ರೀಂ ಕೋರ್ಟ್ ಹಲವಾರು ಬಾರಿ ತೀರ್ಪು ನೀಡಿದರೂ ಬಗೆಹರಿಯದ ನೀರಿನ ಸಮಸ್ಯೆಯನ್ನು ಯಾವ ಕಾನೂನೂ ಬಗೆಹರಿಸಿದ ಇತಿಹಾಸವೇ ಇಲ್ಲ.
ಕರ್ನಾಟಕದಲ್ಲಿನ ಬೆಳೆಗೆ ನೀರಿಲ್ಲ. ಕುಡಿಯುವ ನೀರೂ ಇಲ್ಲ. ಹೀಗಾಗಿ ಮುಖ್ಯಮಂತ್ರಿಗಳು ಈ ಹಿಂದೆತಮಿಳುನಾಡಿಗೆನೀರುಬಿಡುವುದಿಲ್ಲವೆಂದು ಹೇಳಿ ರಾಜ್ಯ ರೈತರ ಹಿತಾಸಕ್ತಿಯನ್ನು ಕಾಪಾಡಿದ್ದರು. ಈಗ ಮತ್ತೊಮ್ಮೆ ನೀರು ಬಿಡುವ ಆದೇಶ ಬಂದಿದೆ.
ಇದಕ್ಕೆ ಎಲ್ಲರೂ ಪಕ್ಷವನ್ನು ಮರೆತು ಒಗ್ಗಟ್ಟಾಗಿ ಕ್ರಮ ಕೈಗೊಳ್ಳಬೇಕಿದೆ. ಬೆಳಗಾವಿ ಅಧಿವೇಶನದಲ್ಲಿ ಪ್ರತಿಪಕ್ಷದವರು ಸಹ ಇದಕ್ಕೆ ಸಮ್ಮತಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ. ಮುಂಗಾರು ಕೈಕೊಟ್ಟದ್ದರಿಂದ ಬರಗಾಲವಿದೆ. ಕರ್ನಾಟಕದಲ್ಲಿ ಮಳೆಯಾಗುವ ಸಂಭವವಿಲ್ಲ.ಆದರೆ ತಮಿಳುನಾಡಿನಲ್ಲಿ ಮುಂದಿನ ತಿಂಗಳು ಮಳೆಯಾಗುವ ಸಂಭವವಿದೆ.
ಇದನ್ನರಿತು ರಾಜ್ಯಸರ್ಕಾರ ವಾಸ್ತವ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡಲು ಕೋರಿ ಅರ್ಜಿ ಸಲ್ಲಿಸಬೇಕೆ ಹೊರತು ನೀರನ್ನು ಮಾತ್ರ ಬಿಡಬಾರದು.ಇದರಲ್ಲಿ ರಾಜಕೀಯ ಬೇಡ. ನಾವು ಕನ್ನಡಿಗರು, ನೆಲ ಜಲ ವಿಷಯ ಬಂದಾಗ ಒಗ್ಗಟ್ಟಾಗಿ ಹೊರಾಡಬೇಕು.