ಕಾವೇರಿ ನದಿ ಪಾತ್ರದಲ್ಲಿರುವ ಕರ್ನಾಟಕ, ಪುದುಚೇರಿ ಮತ್ತು ತಮಿಳುನಾಡು ರಾಜ್ಯಗಳು ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿರುವುದರಿಂದ, ಅಧಿಸೂಚನೆ ಹೊರಡಿಸುವ ಮುನ್ನ ಸುಪ್ರೀಂ ಕೋರ್ಟ್ ಅನುಮತಿ ಅತ್ಯಗತ್ಯವಾಗಿದೆ. ಹೀಗಾಗಿಯೇ ನ್ಯಾಯಮಂಡಳಿಯು 2007ರಲ್ಲೇ ಅಂತಿಮ ಆದೇಶ ಹೊರಡಿಸಿದ್ದರೂ ಈವರೆಗೆ ಆ ಕುರಿತು ಅಧಿಸೂಚನೆ ಪ್ರಕಟಿಸಲು ಸಾಧ್ಯವಾಗಿಲ್ಲ.
ಪ್ರಸ್ತುತ ಕಾವೇರಿ ನೀರು ಹಂಚಿಕೆ ವಿವಾದದ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಕಳೆದ ವಾರ, ನ್ಯಾಯಮಂಡಳಿ ಅಂತಿಮ ಆದೇಶವನ್ನು ಅಧಿಸೂಚನೆಯಾಗಿ ಪ್ರಕಟಿಸಲು ಎಷ್ಟು ದಿನಗಳು ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿತ್ತು. ಈ ಹಿನ್ನೆಲೆಯಲ್ಲಿ, ಕಾವೇರಿ ಮೇಲುಸ್ತುವಾರಿ ಸಮಿತಿ ಮುಖ್ಯಸ್ಥರಾದ ಡಿ.ವಿ. ಸಿಂಗ್ ತಿಂಗಳಾಂತ್ಯದ ವೇಳೆಗೆ ಅಧಿಸೂಚನೆ ಹೊರಡಿಸಲು ಶುಕ್ರವಾರ ನಿರ್ಧರಿಸಿದ್ದರು.
`ತನ್ನ ಮುಂದೆ ವಿವಾದದ ವಿಚಾರಣೆ ಬಾಕಿ ಇರುವ ಹಂತದಲ್ಲೇ ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸುವುದಾದರೆ ನಾವು ಇನ್ನೇನು ಮಾಡಲು ಸಾಧ್ಯ' ಎಂದೂ ಸಚಿವಾಲಯದ ಮೂಲಗಳು ಕೇಳಿವೆ.
ತಮಿಳುನಾಡಿಗೆ 419 ಟಿಎಂಸಿ (ಬೇಡಿಕೆ 562 ಟಿಎಂಸಿ), ಕರ್ನಾಟಕಕ್ಕೆ 270 ಟಿಎಂಸಿ (ಬೇಡಿಕೆ 465 ಟಿಎಂಸಿ), ಕೇರಳಕ್ಕೆ 30 ಟಿಸಿಸಿ ಹಾಗೂ ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ಆಗಬೇಕು ಎಂಬುದು ನ್ಯಾಯಮಂಡಳಿ ಆದೇಶವಾಗಿದೆ. ಇದಲ್ಲದೇ, ಪರಿಸರ ಸಂರಕ್ಷಣೆಗಾಗಿ 10 ಟಿಎಂಸಿ ನೀರನ್ನು ಕಾಯ್ದಿರಿಸುವಂತೆಯೂ ಅದು ಸೂಚಿಸಿದೆ.