ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಞ್ಞಣ್ಣ ರೈ ವಿಚಾರಧಾರೆಗಳು ಪಸರಿಸಬೇಕು

Last Updated 11 ಜೂನ್ 2011, 20:15 IST
ಅಕ್ಷರ ಗಾತ್ರ

ಬೆಂಗಳೂರು: `ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ವಿಚಾರಧಾರೆಗಳು ಕೇವಲ ದಕ್ಷಿಣ ಕನ್ನಡ ಮತ್ತು ಕಾಸರಗೋಡಿಗೆ ಸೀಮಿತಗೊಳ್ಳದೇ ರಾಜ್ಯದ ಉದ್ದಗಲಕ್ಕೂ ಪಸರಿಸಬೇಕಿದೆ~ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಆರ್.ನಾಯಕ್ ಹೇಳಿದರು.

ಪಯಸ್ವಿನಿ ಗೆಳೆಯರ ಬಳಗವು ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಕಯ್ಯಾರ ಕಿಞ್ಞಣ್ಣ ರೈ ಅವರ 97ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `ಯಾವುದೇ ಕೃತಿಯು ಸಾಹಿತಿಯ ಹಿನ್ನೆಲೆಯನ್ನು ಅವಲಂಬಿಸಿರುವಂತೆ ಕಯ್ಯಾರ ಅವರ ಕೃತಿಗಳಲ್ಲಿ ವನ, ಪರಿಸರ ಮತ್ತು ದೇಶಭಕ್ತಿಯ ಕುರಿತು ಅಪಾರ ಕಾಳಜಿಯಿದ್ದು, ಇದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು~ ಎಂದು ಅಭಿಪ್ರಾಯಪಟ್ಟರು.

ವಿಮರ್ಶಕ ಎಸ್.ಆರ್.ವಿಜಯಶಂಕರ, `ರಾಷ್ಟ್ರ ಅಭಿಮಾನವು ಉತ್ತುಂಗದಲ್ಲಿದ್ದ ಸಂದರ್ಭದಲ್ಲೂ ಕಯ್ಯಾರ ಅವರು ಸ್ಥಳೀಯ ವಿದ್ಯಮಾನಗಳ ಕುರಿತು ಆಸಕ್ತಿ ಉಳಿಸಿಕೊಂಡಿದ್ದರು. ವಿವಿಧ ಭಾಷೆಗಳಲ್ಲಿ ಪರಿಣತಿ ಸಾಧಿಸಿದ ಕಯ್ಯಾರ ಅವರಿಗೆ ತುಳು ಮಾತೃ ಭಾಷೆಯಾಗಿದ್ದರೂ ಕನ್ನಡ ಸಾಹಿತ್ಯದಲ್ಲಿ ಅಪಾರ ಕೃಷಿ ಮಾಡಿರುವುದು ವಿಶೇಷ~ ಎಂದರು.

`ಸ್ಥಳೀಯ ಸಂಸ್ಕೃತಿ ಮತ್ತು ತತ್ವವನ್ನು ಕಾವ್ಯದ ಮೂಲಕ ಕಟ್ಟುವ ಕಲೆಯನ್ನು ಸಿದ್ಧಿಸಿಕೊಂಡ ಕಯ್ಯಾರ ಅವರ ಕೃತಿಗಳು ಪ್ರಸ್ತುತ ಸಂದರ್ಭದಲ್ಲಿ ಆಳವಾದ ಅಧ್ಯಯನಕ್ಕೆ ಒಳಪಡಬೇಕು. ಈ ಕುರಿತು  ಸಾಹಿತ್ಯಾಸಕ್ತರು ಚಿಂತಿಸಬೇಕು~ ಎಂದರು.

`ಪ್ರಾದೇಶಿಕ ಸಂಸ್ಕೃತಿ ಜೊತೆಯಲ್ಲಿಯೇ ದೇಶ ಭಕ್ತಿಯನ್ನು ಪ್ರತಿನಿಧಿಸುವ ಕಯ್ಯಾರ ಅವರಿಗೆ `ರಾಷ್ಟ್ರಕವಿ~ ಪದವಿ ನೀಡದಿರುವುದು ಸರ್ಕಾರದ ಬೌದ್ಧಿಕ ದಾರಿದ್ರ್ಯವನ್ನು ಸೂಚಿಸುತ್ತದೆ~ ಎಂಬ ಸಾಹಿತಿ ಶಿವರಾಮ ಕಾರಂತರ ನುಡಿಗಳನ್ನು ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ ಪುನರುಚ್ಚರಿಸಿದರು.

ಸಾಹಿತಿ ಡಾ.ಡಿ.ಕೆ.ಚೌಟ ಮಾತನಾಡಿ, `ಕಯ್ಯಾರ ಅವರು ಹುಟ್ಟು ಹೋರಾಟಗಾರ. ಸ್ವಾತಂತ್ರ್ಯಕ್ಕಾಗಿ, ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಮತ್ತು ಕಾಸರಗೋಡು-ಕರ್ನಾಟಕ ಚಳವಳಿಯಲ್ಲಿ ಕ್ರಿಯಾಶೀಲರಾಗಿದ್ದು, ನಾಡು ನುಡಿಗೆ ಮಿಡಿದ ಶ್ರೇಷ್ಠ ಕವಿ~ ಎಂದು ಬಣ್ಣಿಸಿದರು.

`ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಕಯ್ಯಾರ ಅವರ ನಿಲುವಿನಲ್ಲಿ ಇಂದಿಗೂ ಯಾವುದೇ ಬದಲಾವಣೆ ಕಾಣಲು ಸಾಧ್ಯವಿಲ್ಲ. ಸಮಾಜದಲ್ಲಿರುವ ಅಂತರಿಕ ಭಿನ್ನತೆಯನ್ನು ತಮ್ಮ ಕೃತಿಗಳಲ್ಲಿ ವಿಭಿನ್ನವಾಗಿ ಬಿಂಬಿಸಿದ್ದಾರೆ~ ಎಂದು ಹೇಳಿದರು.

ಸಮಾರಂಭದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ ಸಂಪಾದಿತ ಕೃತಿ `ಕನ್ನಡ ಸಿರಿ~ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಯ್ಯಾರ ಅವರ ಕುರಿತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಬಳಗದ ಅಧ್ಯಕ್ಷ ಎಂ.ಸ್ವಯಂಪ್ರಕಾಶ್, ಕಾರ್ಯದರ್ಶಿ ಬಿ.ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT