ಕಿನ್ನಿಗೋಳಿ (ಮೂಲ್ಕಿ): ಇಲ್ಲಿನ ಪುನರೂರು ಬ್ರಹ್ಮಮುಗೇರ ದೈವಸ್ಥಾನದ ನೇಮೋತ್ಸವದ ಬ್ಯಾನರ್ ಅನ್ನು ಯಾವುದೇ ನೋಟಿಸ್ ನೀಡದೇ ತೆರವುಗೊಳಿಸಿ ದಲಿತ ವಿರೋಧಿ ನೀತಿಯನ್ನು ಅನುಸರಿಸಿದ್ದಾಗಿ ಆಕ್ಷೇಪಿಸಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ಗುರುವಾರ ಗ್ರಾಮಸ್ಥರು ಮುತ್ತಿಗೆ ಹಾಕಿದರು.
ಪುನರೂರು ಹಾಗೂ ಗುತ್ತಕಾಡಿನಲ್ಲಿ ಹಾಕಿದ ಬ್ಯಾನರ್ ಅನ್ನು ಮಾಹಿತಿ ನೀಡದೆ ಪಂಚಾಯಿತಿ ಆಡಳಿತ ಮಂಡಳಿ ತೆಗೆದು ಹಾಕಲಾಗಿದೆ ಎಂದು ಗ್ರಾಮಸ್ಥರಾದ ಜಯಪ್ರಕಾಶ್, ದೇವಪ್ಪ, ಗೋಪಾಲಕೃಷ್ಣರ ನೇತೃತ್ವದಲ್ಲಿ ಗ್ರಾಮಸ್ಥರು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮಾತಿನ ಚಕಮಕಿ ಗಮನಿಸಿ ಮೂಲ್ಕಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಸೋಮಯ್ಯ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕೂಡಲೇ ಪಂಚಾಯಿತಿ ಸದಸ್ಯರ ತುರ್ತು ಸಾಮಾನ್ಯ ಸಭೆಯನ್ನು ನಡೆಸಿ ಬ್ಯಾನರ್ ಹಾಕುವ ವಿಷಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಬೇಕೆಂದು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ ಪ್ರಕಾಶ್ ಹೆಗ್ಡೆ ಸದಸ್ಯರಲ್ಲಿ ವಿನಂತಿಸಿದಾಗ ಸದಸ್ಯರ ನಡುವೆ ಮಾತಿನ ಜಟಾಪಟಿ ನಡೆಯಿತು.