ಬೀದರ್: ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳ ಬಳಿ ಇರುವ ಕಿರಾಣಿ ಅಂಗಡಿಗಳಲ್ಲಿಯೂ ಮದ್ಯ ಮಾರಾಟ ಅವ್ಯಾಹತವಾಗಿ ಸಾಗಿದ್ದು, ಇಂಥ ಬೆಳವಣಿಗೆ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದ್ದು, ಜಿಲ್ಲಾಡಳಿತ ಮತ್ತು ಸರ್ಕಾರ ಈ ಬಗೆಗೆ ಗಮನಹರಿಸಬೇಕು ಎಂದು ಶಾಸಕ ಮಲ್ಲಿಕಾರ್ಜುನ ಖೂಬಾ ಒತ್ತಾಯಿಸಿದ್ದಾರೆ.
ಕಿರಾಣಿ ಅಂಗಡಿಗಳಲ್ಲಿ ಮಾರಾಟ ಆಗುತ್ತಿರುವು ದಷ್ಟೇ ಅಲ್ಲ; ಗರಿಷ್ಠ ಮಾರಾಟ ಬೆಲೆಗಿಂತಲೂ ಅಧಿಕ ಬೆಲೆಗೆ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾಮಾನ್ಯನಿಗೆ ಹೊರೆ ಆಗುವುದಷ್ಟೇ ಅಲ್ಲ; ಸರ್ಕಾರಕ್ಕೂ ಆದಾಯ ನಷ್ಟವಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.
ಕಾನೂನು ಬಾಹಿರವಾಗಿ ಮದ್ಯ ಮಾರಾಟ ಆಗುತ್ತಿರುವುದರ ಕುರಿತು ಈಗಾಗಲೇ ಸಂಸದರು, ಸಂಬಂಧಿಸಿದ ಸಚಿವರ ಗಮನಕ್ಕೂ ತರಲಾಗಿದೆ. ಇದರ ವಿರುದ್ಧ ಕ್ರಮ ಜರುಗಿಸಲು ವಿಫಲವಾಗಿರುವ ಜಿಲ್ಲೆಯ ಅಬಕಾರಿ ಇಲಾಖೆಯು ಹಿರಿಯ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಪಡಿಸಿದರು.
ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುವುದರ ಬಗೆಗೆ ಜನವರಿ 26ರ ವರೆಗೂ ಕಾದು ನೋಡುತ್ತೇವೆ. ಆ ನಂತರ ಕಾನೂನು ಬಾಹಿರ ಮದ್ಯ ಮಾರಾಟದ ವಿರುದ್ಧ ಜಿಲ್ಲೆಯಾದ್ಯಂತ ಪಕ್ಷದ ವತಿಯಿಂದ ಪ್ರತಿಭಟನೆ ಆಯೋಜಿಸಲಾಗುವುದು ಎಂದರು.
ಕಿರಾಣಿ ಅಂಗಡಿಗಳಲ್ಲಿ ಮಾರುವುದರಿಂದ ವಿದ್ಯಾ ರ್ಥಿಗಳ ಮೇಲೆ ಆಗುವ ಪರಿಣಾಮವನ್ನು ಚಿಂತಿಸ ಬೇಕು. ಹೀಗೆ ಕಾನೂನು ವಿರುದ್ಧವಾಗಿ ಮಾರಾಟಕ್ಕೆ ಅನುಮತಿ ನೀಡುವ ಬದಲು ಸರ್ಕಾರ ಬೇಕಿದ್ದರೆ, ಅನ್ನಭಾಗ್ಯದ ರೀತಿಯಲ್ಲಿ ಮದ್ಯಭಾಗ್ಯ ಯೋಜನೆ ಯನ್ನಾದರೂ ಜಾರಿಗೆ ತರಲಿ ಎಂದು ವ್ಯಂಗ್ಯವಾಗಿ ಹೇಳಿದರು.
ಗರಿಷ್ಠ ಮಾರಾಟ ದರಕ್ಕಿಂತಲ್ಲೂ ಹೆಚ್ಚಿನ ಬೆಲೆಗೆ ವಿವಿಧ ಕಂಪೆನಿಯ ಮದ್ಯ ಮಾರಾಟ ಮಾಡಲಾ ಗುತ್ತಿದೆ ಎಂಬ ಆರೋಪಕ್ಕೆ ಪೂರಕವಾಗಿ ಕೆಲ ಮದ್ಯದ ಬಾಟಲಿಗಳನ್ನು ಪ್ರದರ್ಶಿಸಿದ ಅವರು, ಅಬಕಾರಿ ಅಧಿಕಾರಿ ವಿರುದ್ಧ ಕ್ರಮ ಜರುಗಿಸುವ ಭರವಸೆಯನ್ನು ಈಚೆಗೆ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಂಸದ ಧರ್ಮಸಿಂಗ್ ಅವರು ಭರವಸೆ ನೀಡಿದ್ದರು. ಅಧಿಕಾರಿ ವಿರುದ್ಧ ಇನ್ನು ಕ್ರಮ ಜರುಗಿಸಿಲ್ಲ. ಜಿಲ್ಲೆಯಲ್ಲಿ ಅವರ ಮಾತಿಗೂ ಮನ್ನಣೆ ಇಲ್ಲವೇ ಎಂದು ಪ್ರಶ್ನಿಸಿದರು.
ರಸ್ತೆ ಕಾಮಗಾರಿಗೆ ಕಡಿಮೆ ಹಣ: ಸರ್ಕಾರ ಈಚೆಗೆ 30:54 ವರ್ಗದಡಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿಗೆ ವಿಧಾನಸಭಾ ಕ್ಷೇತ್ರವಾರು ಹಣ ಬಿಡು ಗಡೆ ಮಾಡಿದೆ. ಇದರಲ್ಲಿ ಪ್ರತಿ ಕಿ.ಮೀ.ರಸ್ತೆ ಅಭಿವೃದ್ಧಿಗೆ 10 ಸಾವಿರ ರೂಪಾಯಿ ನಿಗದಿಪಡಿಸಿದೆ. ಇಷ್ಟು ಮೊತ್ತದಲ್ಲಿ ರಸ್ತೆ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಕಮಿಷನ್, ಗುತ್ತಿಗೆದಾರರ ಲಾಭ ಕಳೆದು ಅಭಿವೃದ್ಧಿಗೆ ಪ್ರತಿ ಕಿ.ಮೀ.ಗೆ ರೂ. 5 ಸಾವಿರ ರೂಪಾಯಿ ಉಳಿಯಬಹುದು. ಎಷ್ಟು ರಸ್ತೆ ಅಭಿವೃದ್ಧಿ ಸಾಧ್ಯ ಎಂದು ಪ್ರಶ್ನಿಸಿದರು. ಇದರ ಬದಲಾಗಿದೆ ಬಿಡುಗಡೆಯಾಗಿರುವ ಒಟ್ಟು ಹಣದಲ್ಲಿ ಯಾವುದಾ ದರೂ ಒಂದು ರಸ್ತೆ ಸೌಲಭ್ಯವಿಲ್ಲದ ಗ್ರಾಮಕ್ಕೆ ಉತ್ತಮ ರಸ್ತೆ ಅಭಿವೃದ್ಧಿ ಪಡಿಸಲು ಒತ್ತು ನೀಡಬೇಕು ಎಂದು ಒತ್ತಾಯಿಸಿದರು. ಈ ಕುರಿತು ಸರ್ಕಾರಕ್ಕೂ ಮನವಿ ಸಲ್ಲಿಸಲಾಗುವುದು ಎಂದರು.
‘ನಾನಿನ್ನೂ ಯುವಕ, ಲೋಕಸಭೆಗೆ ಸ್ಪರ್ಧಿಸಬಾರದಾ?
ಬೀದರ್: ‘ಲೋಕಸಭೆ ಚುನಾವಣೆಗೆ ಬೀದರ್ ಕ್ಷೇತ್ರದಿಂದ ಕೇವಲ ಮುದುಕರೇ ಸ್ಪರ್ಧೆ ಮಾಡಬೇಕಾ? ಯುವಕರು ನಿಲ್ಲಬಾರದಾ? ನಾನಿನ್ನೂ ಯುವಕನಿದ್ದೇನೆ. ಯುವಕನಾದ ನಾನು ಏಕೆ ಚುನಾವಣೆಗೆ ಸ್ಪರ್ಧಿಸಬಾರದು?’.
ಬಸವಕಲ್ಯಾಣ ಕ್ಷೇತ್ರದ ಶಾಸಕ ಮಲ್ಲಿಕಾರ್ಜುನ ಖೂಬಾ ಅವರ ಪ್ರಶ್ನೆ ಇದು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಮಾತುಗಳನ್ನು ಹೇಳುವ ಮೂಲಕ ಲೋಕಸಭೆ ಚುನಾವಣೆಗೆ ಕ್ಷೇತ್ರದಿಂದ ತಾವು ಪಕ್ಷದ ಟಿಕೆಟ್ನ ಪ್ರಬಲ ಆಕಾಂಕ್ಷಿ ಎಂದು ಪ್ರತಿಪಾದಿಸಿದರು.
‘ಹಿಂದೆ ರಾಮಚಂದ್ರ ವೀರಪ್ಪ ಇದ್ದರು. ಈಗಿನವರು ಹಾಗೇ ಇದ್ದಾರೆ ಎಂದರು. ಪಕ್ಷದ ಟಿಕೆಟ್ ಕೈತಪ್ಪಿದರೆ ಅನ್ಯ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ, ಅಂಥ ಕಾಲ ಬಂದಾಗ ನೋಡೋಣ. ಆದರೆ, ಸ್ಪರ್ಧೆ ಮಾಡಬೇಕು ಎಂದು ಕೊಂಡಿದ್ದೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.