ಬೆಂಗಳೂರು ಹಬ್ಬದ ಪ್ರಯುಕ್ತ ಆ ಸಂಜೆ ಚೌಡಯ್ಯ ಹಾಲ್ನಲ್ಲಿ ನಡೆದ ಕೀರ್ತಿಕುಮಾರ್ ಬಡಶೇಷಿ ಅವರ ಗಾಯನ ಕೇಳುಗರನ್ನು ಅಕ್ಷರಶಃ ಕಟ್ಟಿಹಾಕಿತ್ತು. ಸುಮಧುರ ಹಿಂದುಸ್ತಾನಿ ಗಾಯನ ನಡೆಸಿಕೊಟ್ಟ ಕೀರ್ತಿಕುಮಾರ್, ತಮ್ಮ ಗುರು ಪಂ. ವಿನಾಯಕ ತೊರವಿ ಅವರಿಂದ ವಿದ್ವತ್ಪೂರ್ಣ ಪಾಂಡಿತ್ಯ ಗಳಿಸುವತ್ತ ಮೆಲ್ಲಮೆಲ್ಲನೆ ಹೆಜ್ಜೆ ಹಾಕುತ್ತಿರುವುದು ಅವರ ಗಾಯನದಲ್ಲಿ ಎದ್ದು ಕಾಣುತ್ತಿತ್ತು.
ಬೆಂಗಳೂರಲ್ಲಿ ಹಿಂದುಸ್ತಾನಿ ನಗರದಲ್ಲಿ ಶಾಸ್ತ್ರೀಯ ಸಂಗೀತದ ನೆಲೆಯನ್ನು ಭವಿಷ್ಯತ್ತಿನಲ್ಲೂ ಗಟ್ಟಿಗೊಳಿಸುವತ್ತ ದಿಟ್ಟ ಪ್ರಯತ್ನ ನಡೆಸುತ್ತಿರುವುದನ್ನು ಅವರು ಸಾಬೀತು ಪಡಿಸಿದರು. ವಿಶ್ವವಿಖ್ಯಾತ ಸಂತೂರು ವಾದಕ ಪಂ.ಶಿವಕುಮಾರ್ ಶರ್ಮ ಅವರ ಕಛೇರಿಗೂ ಮುನ್ನ ಹಾಡಿದ ಕೀರ್ತಿಕುಮಾರ್ ಅಂದಿನ ಶಾಸ್ತ್ರೀಯ ಕಛೇರಿಗಳಿಗೆ ಉತ್ತಮ ನಾಂದಿ ಹಾಡಿ ಕೇಳುಗರ ಮನತಣಿಸುವಲ್ಲಿ ಯಶಸ್ವಿಯಾದರು.
ಕಿರಾಣ ಮತ್ತು ಗ್ವಾಲಿಯರ್ ಘರಾಣ ಎರಡನ್ನೂ ಹದವಾಗಿ ಮಿಳಿತಗೊಳಿಸಿದ ವಿಶಿಷ್ಟ ಶೈಲಿಯಲ್ಲಿ ಹಾಡುವ ಕೀರ್ತಿಕುಮಾರ್ ಬಡಶೇಷಿ ಮೂಲತಃ ಗುಲ್ಬರ್ಗದವರು. ಎಲೆಕ್ಟ್ರಾನಿಕ್ಸ್ ಪದವೀಧರ. ಆದರೆ ಚಿಕ್ಕಂದಿನಲ್ಲೇ ಹಿಂದುಸ್ತಾನಿ ಸಂಗೀತ ಅವರನ್ನು ಸೆಳೆದು ಗಾಯಕನನ್ನಾಗಿ ರೂಪಿಸಿತು. ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದ. ಆಕಾಶವಾಣಿ, ದೂರದರ್ಶನಗಳಲ್ಲಿ ಅನೇಕ ಕಾರ್ಯಕ್ರಮಗಳನ್ನೂ ನೀಡಿದ್ದಾರೆ.