ಯಲ್ಲಾಪುರ: ಪಟ್ಟಣದ ಇಸ್ಲಾಂ ಗಲ್ಲಿಯಲ್ಲಿ ಪಟ್ಟಣ ಪಂಚಾಯ್ತಿಯಿಂದ ಪೂರೈಸುವ ಕುಡಿಯುವ ನೀರು ಕೊಳಚೆಯಾಗಿರುವ ಕಾರಣಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆಯಿತು.
ಪಟ್ಟಣದ ಇಸ್ಲಾಮ ಗಲ್ಲಿಯಲ್ಲಿ ಪಟ್ಟಣ ಪಂಚಾಯ್ತಿ ಪೂರೈಕೆಯಾದ ಕಲುಷಿತ ನೀರಿನ ವಿರುದ್ಧ ಸಾಮಾಜಿಕ ಕಾರ್ಯಕರ್ತ ಮಹಮ್ಮದ ಗೌಸ್, ನೇತೃತ್ವದಲ್ಲಿ ಹತ್ತಾರು ಜನರು ತಹಶೀಲ್ದಾರ್ರ ಮನೆಗೆ ತೆರಳಿ ತಮ್ಮ ಅಳಲನ್ನು ವ್ಯಕ್ತಪಡಿಸಿದರು.
ಕಳೆದ ಎರಡು ಮೂರು ದಿನಗಳಿಂದ ಪಟ್ಟಣ ವ್ಯಾಪ್ತಿಯಲ್ಲಿ ಕಸ ಕಡ್ಡಿಯಿರುವ ನೀರಿನಲ್ಲಿ ಮೂಲಕ ಮನೆಗಳಿಗೆ ಪೂರೈಕೆಯಾಗುತ್ತಿದ್ದು, ಇಂತಹ ನೀರು ಕುಡಿದ ಪಕ್ಷದಲ್ಲಿ ಸಾರ್ವಜನಿಕರ ಆರೋಗ್ಯ ಹದಗೆಡುವ ಸಾಧ್ಯತೆಯಿದೆ ಎಂದು ಆರೋಪಿಸಿ ಮಹಾವೀರ ಜಯಂತಿಯ ರಜಾ ದಿನದಂದು ಪಟ್ಟಣ ಪಂಚಾಯ್ತಿ ಕಾರ್ಯಾಲಯಕ್ಕೆ ದೂರು ನೀಡಲಾಗದೇ, ತಹಶೀಲ್ದಾರ್ ನಿವಾಸಕ್ಕೆ ತೆರಳಿ ತಮ್ಮ ವೇದನೆ ವ್ಯಕ್ತಪಡಿಸಿದರು.
ತಹಶೀಲ್ದಾರ್ ಎಂ.ವಿ.ಕಲ್ಲೂರಮಠ ಪಟ್ಟಣ ಪಂಚಾಯ್ತಿ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಕುರಿತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಉಸ್ಮಾನ ಸನದಿ, ಅನ್ವರ ಫೀರಸಾಬ, ನಳೀನಿ ನಾಯ್ಕ, ಅಕ್ತರ ಸೈಯದ್ ಬಾಬರ್ ತಳ್ಳಕೇರಿ ಇದ್ದರು.