ಬಾಗಲಕೋಟೆ: ‘ನೆರೆ ಸಂತ್ರಸ್ತರಿಗೆ ನಿರ್ಮಿಸಲಾಗಿರುವ ‘ಆಸರೆ’ ಕಾಲೊನಿಯೊಂದರಲ್ಲಿ ಶೀಘ್ರದಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ರಾತ್ರಿಯಿಡೀ ಕುಣಿದು ಕುಪ್ಪಳಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಹೇಳಿದರು.
ಬಾದಾಮಿ ತಾಲ್ಲೂಕಿನ ನೆರೆಪೀಡಿತ ಏಳು ಗ್ರಾಮಗಳಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಲಾಗಿರುವ 1074 ‘ಆಸರೆ’ ಮನೆಗಳ ಕೀಲಿಕೈಗಳನ್ನು ಬಾದಾಮಿ ತಾಲ್ಲೂಕಿನ ನೀರಲಗಿ ಗ್ರಾಮದಲ್ಲಿ ಸಂತ್ರಸ್ತರಿಗೆ ವಿತರಿಸಿ ಅವರು ಮಾತನಾಡಿದರು.
ಒಂದು ದಿನ ಸಂಜೆಯೇ ಆಸರೆ ಕಾಲೊನಿಗೆ ಆಗಮಿಸಿ, ಅಂದು ರಾತ್ರಿಯಿಡೀ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕುಣಿದು ಕುಪ್ಪಳಿಸುವ ಬಯಕೆ ತಮ್ಮದಾಗಿದ್ದು, ಶೀಘ್ರದಲ್ಲಿಯೇ ದಿನಾಂಕ ಕೂಡ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.ಬಾಲ್ಯದಲ್ಲಿ ತಾವು ಕಂಡ ಹಳ್ಳಿಯ ಬದುಕು ನೆನಪಿಸಿಕೊಂಡ ಸಿ.ಎಂ, ಒಂದು ರಾತ್ರಿ ಸಂತ್ರಸ್ತರೊಂದಿಗೆ ಕಳೆಯುವುದಾಗಿ ಹೇಳಿದರು.
ಸರ್ಕಾರವು ರಾಜ್ಯದಲ್ಲಿ ಒಟ್ಟು 1075 ಕೋಟಿ ರೂ. ವೆಚ್ಚದಲ್ಲಿ 60 ಸಾವಿರ ‘ಆಸರೆ’ ಮನೆಗಳನ್ನು ನಿರ್ಮಿಸುವ ಮೂಲಕ ನೆರೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಿದೆ ಎಂದು ಯಡಿಯೂರಪ್ಪ ತಿಳಿಸಿದರು.ಕಾರ್ಯಕ್ರಮ ಮುಗಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರನ್ನು ಕರೆದ ಮುಖ್ಯಮಂತ್ರಿಗಳು, ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿಗದಿಪಡಿಸುವಂತೆ ಸೂಚನೆ ನೀಡುವ ಮೂಲಕ ಕುಣಿದು ಕುಪ್ಪಳಿಸುವ ತಮ್ಮ ನಿರ್ಧಾರವನ್ನು ಖಚಿತಪಡಿಸಿದರು.
ವಸತಿ ಸಚಿವ ವಿ.ಸೋಮಣ್ಣ, ಸಚಿವರಾದ ಮುರುಗೇಶ ನಿರಾಣಿ, ಗೋವಿಂದ ಕಾರಜೋಳ, ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮಾಜಿ ಶಾಸಕ ಪಿ.ಎಚ್.ಪೂಜಾರ ಮತ್ತಿತರರು ಉಪಸ್ಥಿತರಿದ್ದರು.