ಪ್ರಜಾವಾಣಿ `ಸಂಗತ~ ದಲ್ಲಿ ವಿದ್ವಾಂಸರಿಂದ ನಡೆಯುತ್ತಿರುವ ಹಂಡೆ ವಜೀರರು ಯಾವ ಕುಲದವರು ಎಂಬ ವಾದ ಪ್ರತಿವಾದಗಳನ್ನು ಗಮನಿಸುತ್ತಿದ್ದೇನೆ. ಈ ಬಗ್ಗೆ ನನಗೆ ಕೆಲ ಗೊಂದಲ ಕಾಡುತ್ತಿದೆ. ವಿಷಯ ಮಂಡನೆಕಾರರು ಅವರು ಹಾಲುಮತ ಮೂಲದವರು ಎಂದು ಹಲವು ದಾಖಲೆ ಒದಗಿಸಿದ್ದಾರೆ.
ಪ್ರತಿಮಂಡನೆಕಾರರು ಅದನ್ನು ಅಲ್ಲಗಳೆಯುತ್ತ ಅವರ ಆಚರಣೆ, ದಾನಶಾಸನಗಳನ್ನು ಉದಾಹರಿಸುತ್ತಿದ್ದಾರೆ. ಇಂದಿನ ಹಿಂದೂ ಸಮಾಜದಲ್ಲಿ ಒಂದು ಸಮೂಹ ಇಂತಹ ಜಾತಿಗೆ ಸೇರಿದೆ ಎಂದು ಹೇಳಿಕೊಳ್ಳಲು ಅದಕ್ಕೆ ಒಂದು ಬುಡಕಟ್ಟಿಗೆ ಸೇರಿದ ಇತಿಹಾಸ ಇರಲೇಬೇಕು ಎಂದು ಓದಿದ್ದೇನೆ. ಪ್ರತಿ ಮಂಡನೆಕಾರರು `ವೀರಶೈವರು, ಲಿಂಗಾಯತರು~ ಎಂದು ಹೇಳುತ್ತಾರೆ. ಮೊದಲಿಗೆ ಲಿಂಗಾಯತ(ವೀರಶೈವ) ಒಂದು ಪ್ರಸಾರ ಧರ್ಮವಾಗಿದೆ. ಅದರಲ್ಲಿ ಸೇರಿರುವ ಎಲ್ಲ ಜಾತಿಗಳಿಗೆ ಒಂದು ವೃತ್ತಿ ಮತ್ತು ಕುಲಮೂಲದ ಬುಡಕಟ್ಟು ಇದೆ. ಇವರಿಗೆ ಯಾವುದಿದೆ?
ಡಾ. ಬಿ. ರಾಜಶೇಖರಪ್ಪ ಅವರ ಉತ್ತರದಲ್ಲಿ ದ್ವಂದ್ವ ಇದೆ. ಅವರು ಹಂಡೆ ವಜೀರರು 500 ವರ್ಷಗಳ ಹಿಂದೆ ವೀರಶೈವರಾದರು ಎನ್ನುತ್ತಾರೆ, ಜೊತೆಗೆ ಅವರ ಮೂಲಜಾತಿ ಮುಚ್ಚಿಟ್ಟಿದ್ದಾರೆ. ಇದೇ ಲೇಖಕರು ``ಹಂಡೆ ವಜೀರರು ಹಂಡೇ ಕುರುಬರಿಂದ ಬಂದವರು ಎಂದು ಸ್ಪಷ್ಟವಾಗಿ ಬರೆದಿದ್ದಾರೆ (ನೋಡಿ, ಹಾಲುಮತ ವ್ಯಾಸಂಗ 2, ಪ್ರಸಾರಾಂಗ ಕನ್ನಡ ವಿವಿ, ಹಂಪಿ, ಪುಟ 87).
ಬಾಲದ ಹನುಮಪ್ಪ ನಾಯಕ ಕುರುಬರವನು ಅವನು ಶೈವ ಮಾರ್ಗಾನುಯಾಯಿ ಎಂದು ಅನೇಕ ಲೇಖಕರು ಬರೆದಿದ್ದನ್ನು ಓದಿದ್ದೇನೆ. ಇವರು ಹಾಲುಮತದವರೇ ಆಗಿದ್ದರೆ ತಾವು ಕುರುಬರೆಂದು ಒಪ್ಪಿಕೊಳ್ಳಲು ಕುಂದೇನು? ಎಂಬ ಪ್ರಶ್ನೆ ಕಾಡುತ್ತದೆ.