ಎಚ್.ಡಿ.ಕೋಟೆ: ಕೇವಲ ನಾಲ್ಕುವರೆ ವರ್ಷದಲ್ಲಿ ಕುರ್ಚಿ ಆಸೆಯಿಂದ ಬಿಜೆಪಿ ಮೂರು ಗುಂಪುಗಳಾಗಿ, ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಸೋಮವಾರ ನಡೆದ `ಕಾಂಗ್ರೆಸ್ಸಿನೊಂದಿಗೆ ಬನ್ನಿ, ಬದಲಾವಣೆ ತನ್ನಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹಣದ ಲೂಟಿ ಮಾಡಿದೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಉಪ ಚುನಾವಣೆಗಳಲ್ಲಿ ಹಣದ ಹೊಳೆ ಹರಿಸುವ ಮೂಲಕ ಅಧಿಕಾರ ನಡೆಸುತ್ತಿದೆ. ಇತರೆ ಪಕ್ಷಗಳು ಅಧಿಕಾರಕ್ಕಾಗಿ ಮತ್ತು ಹಣದ ಲೂಟಿಗಾಗಿ ಹಾತೊರೆಯುತ್ತಿವೆ. ಅಕ್ರಮ ಗಣಿಗಾರಿಕೆಯಿಂದ ಹಣ ಲೂಟಿ ಮಾಡಿ ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ. ಇದಕ್ಕಿಂತ ಭಿನ್ನವಾಗಿ ಕಾಂಗ್ರೆಸ್ ಪಕ್ಷ ತ್ಯಾಗ ಮತ್ತು ಬಲಿದಾನದ ಪ್ರತಿರೂಪ ಎಂದರು.
ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ತಾಲ್ಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ. ಆದರೆ ನೀರು ಮತ್ತು ಅರಣ್ಯದಿಂದ ಸಂಪತ್ಭರಿತವಾಗಿದೆ. ತಾಲ್ಲೂಕಿನಲ್ಲಿ ಹೆಚ್ಚುವರಿ ತಂಬಾಕು ಹರಾಜು ಮಾರುಕಟ್ಟೆ ನಿರ್ಮಾಣ ಮತ್ತು ಇ-ಹರಾಜು ವ್ಯವಸ್ಥೆಯನ್ನು ಜಾರಿಗೊಳಿಸಲು ಶ್ರಮವಹಿಸಲಾಗಿದೆ ಎಂದರು.
ಶಾಸಕ ಚಿಕ್ಕಣ್ಣ ಮಾತನಾಡಿ, ಕ್ಷೇತ್ರದಲ್ಲಿ ಈಗಾಗಲೇ ರಸ್ತೆ ಕಾಮಗಾರಿ ಆರಂಭಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು, ಸಂದೇಶ್ ನಾಗರಾಜು ಪುನಃ ಪೂಜೆ ಮಾಡಿ ನಾನು ಭೂಮಿಪೂಜೆ ಮಾಡಿರುವುದು ಅನಧಿಕೃತ ಎಂದು ಹೇಳಿಕೆ ನೀಡಿರುವುದು ಅಸಮಂಜಸ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಮತ್ತು ಬಿಜೆಪಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಆರ್ಟಿ ರಸ್ತೆ ಮತ್ತು ದಮ್ಮನಕಟ್ಟೆ ಭಾಗದ ರಸ್ತೆಗಳ ಕಾಮಗಾರಿಗೆ ಮಂಜೂರಾತಿ ಸಿಗಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸಹಕಾರ ಕಾರಣ ಎಂದರು.
ಶಾಸಕರಾದ ಎಚ್.ಎಸ್.ಮಹದೇವಪ್ರಸಾದ್, ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಎಂ.ಸತ್ಯನಾರಾಯಣ್, ಜಿಲ್ಲಾ ಪಂಚಾಯಿತಿ ಸದಸ್ಯೆ ನಂದಿನಿಚಂದ್ರಶೇಖರ್, ಕೆಪಿಸಿಸಿ ಸದಸ್ಯರಾದ ಸುಂದರದಾಸ್, ಜಯಮಂಗಳ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಬೀರಂಬಳ್ಳಿ ಪ್ರಭಾಕರ್, ಬಿ.ವಿ.ಬಸವರಾಜ್, ಎಂ.ಎನ್.ಜಗದೀಶ್, ಕೃಷ್ಣೇಗೌಡ, ತಮ್ಮಣ್ಣೇಗೌಡ, ಬಾಲಯ್ಯ, ಜಕ್ಕಳ್ಳಿ ಮಹದೇವಪ್ಪ, ಪ್ರಕಾಶ್, ಸಿದ್ದರಾಮೇಗೌಡ, ನಾಗರಾಜು, ಪಟೇಲ್ ರಾಜೇಗೌಡ, ನಾಗೇಶ್, ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.