ಮೈಸೂರು: ನಗರದಲ್ಲಿ ಸರಣಿ ಕಳ್ಳತನ ಮತ್ತೆ ಮುಂದುವರೆದಿದ್ದು, ಕುವೆಂಪುನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಗಡಿಗಳ ಷಟರ್ ಮೀಟಿ ಒಳನುಗ್ಗಿರುವ ದುಷ್ಕರ್ಮಿಗಳು ರೂ.50 ಸಾವಿರ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.
ವಿವೇಕಾನಂದನಗರದ ರಾಜರಾಜೇಶ್ವರಿ ವೈನ್ಸ್ ಸ್ಟೋರ್, ಶ್ರೀನಿಧಿ ಎಂಟರ್ಪ್ರೈಸಸ್, ಲಕ್ಷ್ಮಿ ಮೆಡಿಕಲ್ಸ್, ವಿಶಾಲ್ ಮೆಡಿಕಲ್ಸ್, ಮೊಬೈಲ್ ಅಂಗಡಿಗಳಲ್ಲಿ ಗುರುವಾರ ಮುಂಜಾನೆ ದುಷ್ಕರ್ಮಿಗಳು ಕಳವು ಮಾಡಿದ್ದಾರೆ.
ಹಾರೆ ಬಳಸಿ ಅಂಗಡಿಗಳ ಷಟರ್ಗಳನ್ನು ಮೀಟಿ ಒಳನುಗ್ಗಿರುವ ದುಷ್ಕರ್ಮಿಗಳು ಹಣಕ್ಕಾಗಿ ಗಲ್ಲಾಪೆಟ್ಟಿಗೆಗಳನ್ನು ಜಾಲಾಡಿದ್ದಾರೆ. ಆದರೆ ಹೆಚ್ಚಿನ ಹಣ ಲಭ್ಯವಾಗಿಲ್ಲ. ವೈನ್ಸ್ ಸ್ಟೋರ್ನಲ್ಲಿ ಬೆಲೆಬಾಳುವ ಮದ್ಯದ ಬಾಟಲಿಗಳು, ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಹ್ಯಾಂಡ್ ಸೆಟ್ಗಳು ಹಾಗೂ ಮೆಡಿಕಲ್ ಸ್ಟೋರ್ಗಳಲ್ಲಿ ಚಿಲ್ಲರೆ ಹಣವನ್ನು ಕದ್ದೊಯ್ದಿದ್ದಾರೆ. ಅಂಗಡಿಗಳ ಷಟರ್ಗಳನ್ನು ಮೀಟಿರುವುದನ್ನು ಕಂಡ ದಾರಿಹೋಕರು ಕೂಡಲೇ ಕುವೆಂಪುನಗರ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದರು. ಅಂಗಡಿ ಮಾಲೀಕರು ಕಳ್ಳತನದ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದರು.
ಬೆರಳಚ್ಚು ತಜ್ಞರ ತಂಡ, ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಕುವೆಂಪುನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಪ್ರಕರಣ ದಾಖಲಾಗಿದೆ.