ಸಂಡೂರು: ಬೆಳಕು ಹರಿದಾಗ, ಸಂಜೆ ಆವರಿಸ ತೊಡಗಿದಾಗ ಬೆಳ್ಳಕ್ಕಿ, ಗೊರವಂಕ, ಗಿಳಿ ಮುಂತಾದ ಪಕ್ಷಿಗಳ ಹಾರಾಟ, ಕಲರವ ನೋಡುಗರಿಗೆ ಹಾಗೂ ಕೇಳುಗರಿಗೆ ಅಮಿತಾನಂದವನ್ನು ನೀಡುತ್ತದೆ. ಇಂಥ ಸನ್ನಿವೇಶ ನಮಗೆ ಕಂಡು ಬರುವುದು ಸಂಡೂರಿಗೆ ಹೊಂದಿಕೊಂಡಿರುವ ಕೃಷ್ಣಾನಗರದ ಐತಿಹಾಸಿಕ ಕೋಟೆಯ ಪಕ್ಕದಲ್ಲಿನ ನೀರಿನ ಹೊಂಡದಲ್ಲಿ ಬೆಳೆದ ಗಿಡಗಂಟಿಗಳಲ್ಲಿ.
ಹೈದರಾಲಿಯಿಂದ ಪ್ರಾರಂಭಗೊಂಡು, ಟಿಪ್ಪುಸುಲ್ತಾನ್ನಿಂದ ಪೂರ್ಣಗೊಂಡಿರುವ ಇಲ್ಲಿನ ಐತಿಹಾಸಿಕ ಕೃಷ್ಣಾನಗರ ಕೋಟೆಯ ಸುತ್ತಲಿನ ಕಂದಕದಲ್ಲಿ ಬೆಳೆದಿರುವ ಗಿಡಗಂಟಿಗಳು ಮತ್ತು ಬೆಳೆದು ವಿನಾಶದ ಅಂಚಿಗೆ ತಲುಪಿರುವ ಬಿದಿರಿನ ಪೊದೆ ಇಲ್ಲಿಗೆ ಬರುವ ಪಕ್ಷಿಗಳಿಗೆ ಆಶ್ರಯವನ್ನು ಒದಗಿಸಿದೆ. ಇಲ್ಲಿ ಬೆಳ್ಳಕ್ಕಿಗಳು, ಗೊರವಂಕಗಳು ಹೆಚ್ಚಾಗಿ ಕಂಡರೆ, ಅವುಗಳ ಜೊತೆಗೆ ಗಿಳಿಗಳು ಅಲ್ಪ ಪ್ರಮಾಣದಲ್ಲಿ ಕಂಡು ಬರುತ್ತವೆ.