ಬೆಂಗಳೂರು: ನೂತನ ಮೇಯರ್ ಬಿ.ಎಸ್. ಸತ್ಯನಾರಾಯಣ ಅವರ ಬಲು ಪ್ರಿಯವಾದ ಕೆ.ಆರ್. ಮಾರುಕಟ್ಟೆ ಸ್ವಚ್ಛತಾ ಆಂದೋಲನ ನಿಗದಿಯಂತೆ ಸೋಮವಾರ ಆರಂಭವಾಯಿತು. ಆಚಾರ್ಯ ಪಾಠಶಾಲೆಯ 500ಕ್ಕೂ ಅಧಿಕ ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ಮಾರುಕಟ್ಟೆ ಪ್ರದೇಶವನ್ನು ಶುಚಿಗೊಳಿಸಿದರು.
ಬೆಳಿಗ್ಗೆ ಶುರುವಾದ ಸ್ವಚ್ಛತಾ ಕಾರ್ಯ ಮಧ್ಯಾಹ್ನದವರೆಗೆ ಮುಂದುವರಿಯಿತು. ವಿದ್ಯಾರ್ಥಿಗಳ ಜತೆಗೆ ಪೌರ ಕಾರ್ಮಿಕರು, ಗ್ಯಾಂಗ್ಮನ್ಗಳು ಸಹ ಕೈಜೋಡಿಸಿದರು. 20 ಲಾರಿಗಳು ಮತ್ತು 60 ಆಟೊ ಟಿಪ್ಪರ್ಗಳನ್ನು ಈ ವಿಶೇಷ ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು.
ಮೇಯರ್ ಸತ್ಯನಾರಾಯಣ, ಸಂಸದ ಎಚ್.ಎನ್. ಅನಂತಕುಮಾರ್, ಉಪ ಮೇಯರ್ ಇಂದಿರಾ, ಬಿಬಿಎಂಪಿ ಕೆಲವು ಸದಸ್ಯರು ಸಹ ಪೊರಕೆ ಹಿಡಿದು ಸ್ವಚ್ಛತಾ ಆಂದೋಲನದಲ್ಲಿ ಪಾಲ್ಗೊಂಡರು. ಕಪ್ಪು ಟಿ–ಶರ್ಟ್ ಧರಿಸಿ ಕಸಗುಡಿಸಿದ ಅವರು, ಫೋಟೋಗ್ರಾಫರ್ಗಳು ಕ್ಯಾಮೆರಾ ಕ್ಲಿಕ್ಕಿಸುವುದು ಮುಗಿಯುತ್ತಿದ್ದಂತೆ ಪೊರಕೆಗಳನ್ನು ಕೆಳಗಿಟ್ಟರು.
ವಿದ್ಯಾರ್ಥಿಗಳಿಗೆ ಕೈಚೀಲ, ಪೊರಕೆ, ಸಲಿಕೆ, ಗುದ್ದಲಿಗಳನ್ನು ಒದಗಿಸಲಾಗಿತ್ತು. ಅರ್ಧದಷ್ಟು ವಿದ್ಯಾರ್ಥಿಗಳು ಕಸಗುಡಿಸಿದರೆ ಉಳಿದವರು ತ್ಯಾಜ್ಯ ಸಂಗ್ರಹಿಸಿ, ಆಟೊ ಟಿಪ್ಪರ್ಗಳಿಗೆ ಸಾಗಿಸಿದರು. ಮಾರುಕಟ್ಟೆ ಒಳಾಂಗಣ, ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಆರ್. ರಾಮಲಿಂಗಾರೆಡ್ಡಿ ಸ್ವಚ್ಛತಾ ಕಾರ್ಯಾಚರಣೆಗೆ ಚಾಲನೆ ನೀಡಿದರು. ಸ್ವಚ್ಛತಾ ಆಂದೋಲನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ‘ಮಾರುಕಟ್ಟೆ ಸದಾ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು’ ಎಂದು ವ್ಯಾಪಾರಿಗಳಿಗೆ ತಿಳಿಸಿದರು.
‘ಮೇಯರ್ ಆದ ನಂತರ ಘೋಷಣೆ ಮಾಡಿದಂತೆ ಸ್ವಚ್ಛತಾ ಆಂದೋಲನಾ ಪ್ರಾರಂಭಿಸಿದ್ದು, ನಾನು ಓದಿದ ಸಂಸ್ಥೆಯ ವಿದ್ಯಾರ್ಥಿಗಳ ನೆರವಿನಿಂದಲೇ ಆರಂಭ ಆಗಿರುವುದು ಸಂತಸ ತಂದಿದೆ’ ಎಂದು ಸತ್ಯನಾರಾಯಣ ಹೇಳಿದರು. ಪಾಠ ಶಾಲಾ ಸಂಸ್ಥೆಯ ಅಧ್ಯಕ್ಷ ಟಿ.ವಿ. ಮಾರುತಿ ಇದ್ದರು.