ಮಂಡ್ಯ: ಕೆಆರ್ಎಸ್ (ಕೃಷ್ಣರಾಜಸಾಗರ) ಜಲಾಶಯದ ಬೃಂದಾವನ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ `ಬೋಟಿಂಗ್' ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ರಂಗನತಿಟ್ಟು ಪಕ್ಷಿಧಾಮದಲ್ಲಿ `ಬೋಟಿಂಗ್' ನಡೆದಿದೆಯಾದರೂ, ನೀರಿನ ಪ್ರಮಾಣದಲ್ಲಿ ಹೆಚ್ಚಳವಾದರೆ ಯಾವುದೇ ಕ್ಷಣದಲ್ಲಿ ನಿಲ್ಲಿಸಬಹುದು.
ಕೆಆರ್ಎಸ್ ಜಲಾಶಯದ ಬೃಂದಾವನ ವೀಕ್ಷಣೆಗೆ ಆಗಮಿಸುವ ಬಹುತೇಕ ಪ್ರವಾಸಿಗರು `ಬೋಟಿಂಗ್' ಯಾನದ ಸವಿಯನ್ನು ಸವಿಯದೇ ಹೋಗುವುದಿಲ್ಲ. ಸಾಲಿನಲ್ಲಿ ನಿಂತು ಬೋಟಿಂಗ್ನ ಸವಿಯನ್ನು ಅನುಭವಿಸುತ್ತಾರೆ. ಒಂದು ವಾರದಿಂದ `ಬೋಟಿಂಗ್' ಬಂದ್ ಮಾಡಲಾಗಿದೆ. ಇದರಿಂದ ಅಲ್ಲಿಗೆ ಆಗಮಿಸುವ ಸಾವಿರಾರು ಪ್ರವಾಸಿಗರು ನಿರಾಸೆಯಿಂದ ತೆರಳುತ್ತಿದ್ದಾರೆ.
ಜಲಾಶಯದ 50 ಪ್ಲಸ್ ಗೇಟ್ ದುರಸ್ತಿ ನಡೆಯುತ್ತಿರುವುದರಿಂದ ನೀರು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹರಿದುಬರುತ್ತಿದೆ. ಅಂತಹ ಸಂದರ್ಭದಲ್ಲಿ ಬೋಟಿಂಗ್ಗೆ ಅವಕಾಶ ಕೊಡುವುದು ಅಪಾಯಕಾರಿ. ಗೇಟ್ ದುರಸ್ತಿಯಾಗುವವರೆಗೂ ಬೋಟಿಂಗ್ ಇರುವುದಿಲ್ಲ ಎನ್ನುತ್ತಾರೆ ಅಲ್ಲಿನ ಸಹಾಯಕ ಎಂಜಿನಿಯರ್ ನಟೇಶ್.
50 ಪ್ಲಸ್ ಗೇಟ್ ದುರಸ್ತಿ ಆರಂಭವಾಗಿ ನಾಲ್ಕು ತಿಂಗಳುಗಳೇ ಕಳೆದಿವೆ. ಗುತ್ತಿಗೆಯ ಒಪ್ಪಂದದಂತೆ ಜಲಾಶಯಕ್ಕೆ ಹೆಚ್ಚಿನ ನೀರು ಸಂಗ್ರಹ ಅಂದರೆ, ಜೂನ್ 15ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಇನ್ನೂ ನಡೆದಿದೆ.
ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.
ಬೃಂದಾವನ ಉದ್ಯಾನ ವೀಕ್ಷಿಸಿದ್ದೇವೆ. ಬೋಟಿಂಗ್ ಮಾಡಬೇಕೆಂದು ಇತ್ತು. ಬಂದ್ ಮಾಡಿರುವುದರಿಂದ ಸ್ವಲ್ಪ ನಿರಾಸೆಯಾಗಿದೆ ಎಂದರು ಹಾಸನ ನಿವಾಸಿ ದೊಡ್ಡಬೋರೇಗೌಡ.
ರಂಗನತಿಟ್ಟು ಪಕ್ಷಿಧಾಮ: ಕಳೆದ ಒಂದು ವಾರದಿಂದ ರಂಗನತಿಟ್ಟು ಪಕ್ಷಿಧಾಮದಲ್ಲಿಯೂ `ಬೋಟಿಂಗ್' ನಿಲ್ಲಿಸಲಾಗಿತ್ತು. ಶನಿವಾರ ಬೆಳಿಗ್ಗೆಯಿಂದಷ್ಟೇ ಆರಂಭಿಸಲಾಗಿದೆ.
ನದಿ ನೀರಿನ ಹರಿವಿನಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ `ಬೋಟಿಂಗ್' ನಿಲ್ಲಿಸಲಾಗಿತ್ತು. ನೀರಿನ ಹರಿವು ಹೆಚ್ಚಿದ್ದಾಗ ಸೆಳೆವು ಜಾಸ್ತಿಯಾಗಿರುತ್ತದೆ. ಆದ್ದರಿಂದ ಬೋಟಿಂಗ್ ನಿಲ್ಲಿಸಲಾಗಿತ್ತು. ಶನಿವಾರ ಬೆಳಿಗ್ಗೆ ನೀರು ಕಡಿಮೆಯಾಗಿದ್ದರಿಂದ ಆರಂಭಿಸಲಾಗಿದೆ. ಮತ್ತೆ ನೀರು ಹೆಚ್ಚಾದರೆ ನಿಲ್ಲಿಸಲಾಗುವುದು ಎನ್ನುತ್ತಾರೆ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಶ್.
ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ನಲ್ಲಿ ಹೋದಾಗಲೇ ಪಕ್ಷಿಗಳನ್ನು ಹತ್ತಿರದಿಂದ ವೀಕ್ಷಿಸಲು ಸಾಧ್ಯವಾಗುತ್ತದೆ. ಬೋಟಿಂಗ್ ಇಲ್ಲದಿದ್ದರೆ, ಪಕ್ಷಿಧಾಮಕ್ಕೆ ಹೋಗಿಯೂ ಪಕ್ಷಿಗಳನ್ನು ಸರಿಯಾಗಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ.
`ಒಂದು ವಾರದಿಂದ ಬೋಟಿಂಗ್ ಸೌಲಭ್ಯ ಇರಲಿಲ್ಲವಂತೆ. ಇವತ್ತು ಆರಂಭವಾಗಿರುವುದು ಸಂತಸ ತಂದಿದೆ. ಈಗಷ್ಟೇ ಬೋಟಿಂಗ್ನಲ್ಲಿ ಹೋಗಿ ಪಕ್ಷಿಗಳನ್ನು ವೀಕ್ಷಿಸಿ ಬಂದೆ' ಎಂದರು ಬೆಂಗಳೂರಿನ ನಿವಾಸಿ ಪ್ರಭಾತ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.