ಬೆಂಗಳೂರು: ಯುವ ಆಟಗಾರ ಕೆ.ಎಲ್.ರಾಹುಲ್ ಅವರ ಆಕರ್ಷಕ ಶತಕದ ನೆರವಿನಿಂದ ಕೆಎಸ್ಸಿಎ ಇಲೆವೆನ್ ತಂಡದವರು ಮಂಗಳವಾರ ಇಲ್ಲಿ ಆರಂಭವಾದ ಶಫಿ ದಾರಾಷ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಗೋವಾ ಕ್ರಿಕೆಟ್ ಸಂಸ್ಥೆ ಎದುರು ಭಾರಿ ಮೊತ್ತ ದಾಖಲಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಈ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಕೆಎಸ್ಸಿಎ ಇಲೆವೆನ್ ತನ್ನ ಮೊದಲ ಇನಿಂಗ್ಸ್ನಲ್ಲಿ 86.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 334 ರನ್ ಕಲೆಹಾಕಿದೆ.
ಟಾಸ್ ಗೆದ್ದ ಗೋವಾ ತಂಡದವರು ಪಿಚ್ನ ಸದುಪಯೋಗ ಪಡೆಯಲು ಮೊದಲು ಬೌಲ್ ಮಾಡಲು ನಿರ್ಧರಿಸಿದರು. ಜಾರ್ಖಂಡ್ ತಂಡದ ಎದುರು ತ್ರಿಶತಕ ಬಾರಿಸಿದ್ದ ಆರಂಭಿಕ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಬೇಗನೇ ಔಟ್ ಆದರು. ಆದರೆ ರಾಹುಲ್ ಎದುರಾಳಿಯ ಯೋಜನೆಗಳನ್ನು ತಲೆಕೆಳಗು ಮಾಡಿದರು. 240 ಎಸೆತಗಳನ್ನು ಎದುರಿಸಿದ ಅವರು 22 ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ಸಮೇತ 162 ರನ್ ಗಳಿಸಿದರು.
ರಾಹುಲ್ಗೆ ಉತ್ತಮ ಬೆಂಬಲ ನೀಡಿದ್ದು ಗಣೇಶ್ ಸತೀಶ್ (91; 166 ಎ, 9 ಬೌಂ.). ಇವರಿಬ್ಬರು ಎರಡನೇ ವಿಕೆಟ್ಗೆ 197 ರನ್ ಸೇರಿಸಿ ತಂಡದ ಮೊತ್ತ ಹೆಚ್ಚಿಸಿದರು. ಮನೀಷ್ ಪಾಂಡೆ (ಬ್ಯಾಟಿಂಗ್ 28) ಹಾಗೂ ನಾಯಕ ಸಿ.ಎಂ.ಗೌತಮ್ (ಬ್ಯಾಟಿಂಗ್ 27) ಎರಡನೇ ದಿನಕ್ಕೆ ತಮ್ಮ ಆಟ ಕಾದಿರಿಸಿದ್ದಾರೆ.
ಆಲೂರು ಕ್ರೀಡಾಂಗಣದಲ್ಲಿ ಆರಂಭವಾದ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯದಲ್ಲಿ ಕೆಎಸ್ಸಿಎ ಕೋಲ್ಟ್ಸ್ ಮೊದಲ ದಿನದಾಟದ ಅಂತ್ಯಕ್ಕೆ 92.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿದೆ. ಅಭಿಷೇಕ್ ರೆಡ್ಡಿ ಶತಕ ಗಳಿಸಿದರು.
ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ಎದುರು ಕೇರಳ ಕ್ರಿಕೆಟ್ ಸಂಸ್ಥೆ ಉತ್ತಮ ಮೊತ್ತದತ್ತ ದಾಪುಗಾಲಿರಿಸಿದೆ. ಈ ತಂಡ ಮೊದಲ ದಿನದಾಟದ ಅಂತ್ಯಕ್ಕೆ 98 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 304 ರನ್ ಪೇರಿಸಿದೆ.
ಮೈಸೂರಿನ ಎಸ್ಜೆಸಿಇ ಎಂಜಿನಿಯರಿಂಗ್ ಕಾಲೇಜ್ ಕ್ರೀಡಾಂಗಣದಲ್ಲಿ ಆರಂಭವಾದ ಕೆಎಸ್ಸಿಎ ಕಾರ್ಯದರ್ಶಿಗಳ ಇಲೆವೆನ್ ಹಾಗೂ ಆಂಧ್ರ ಕ್ರಿಕೆಟ್ ಸಂಸ್ಥೆ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.
ಸಂಕ್ಷಿಪ್ತ ಸ್ಕೋರ್
ಪಂದ್ಯ-1 (ಎಂ.ಚಿನ್ನಸ್ವಾಮಿ ಕ್ರೀಡಾಂಗಣ)
ಕೆಎಸ್ಸಿಎ ಇಲೆವೆನ್: ಮೊದಲ ಇನಿಂಗ್ಸ್ 86.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 334 (ಕೆ.ಎಲ್.ರಾಹುಲ್ 162, ಗಣೇಶ್ ಸತೀಶ್ 91, ಮನೀಷ್ ಪಾಂಡೆ ಬ್ಯಾಟಿಂಗ್ 28, ಸಿ.ಎಂ.ಗೌತಮ್ ಬ್ಯಾಟಿಂಗ್ 27; ಸೈಯದ್ ಬಾದಿಯುಜಾಮ 39ಕ್ಕೆ3). ಗೋವಾ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯ.
ಪಂದ್ಯ-2 (ಆದಿತ್ಯ ಗ್ಲೋಬಲ್ ಕ್ರೀಡಾಂಗಣ)
ಜಾರ್ಖಂಡ್ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 90.2 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 (ವಿಶಾಲ್ ಸಿಂಗ್ ಬ್ಯಾಟಿಂಗ್ 100, ಸೌರಭ್ ತಿವಾರಿ 79; ವಿವೇಕ್ ಯಾದವ್ 56ಕ್ಕೆ2); ರಾಜಸ್ತಾನ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯ.
ಪಂದ್ಯ-3 (ಆಲೂರು ಕ್ರೀಡಾಂಗಣ-1)
ಕೆಎಸ್ಸಿಎ ಕೋಲ್ಟ್ಸ್: ಮೊದಲ ಇನಿಂಗ್ಸ್ 92.4 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 253 (ಅಭಿಷೇಕ್ ರೆಡ್ಡಿ 105, ಕೆ.ವಿ.ಸಿದ್ಧಾರ್ಥ್ ಬ್ಯಾಟಿಂಗ್ 81; ಜಯೇಶ್ 35ಕ್ಕೆ3, ಧರ್ಮೇಂದ್ರ ಜಡೇಜ 48ಕ್ಕೆ2); ಸೌರಾಷ್ಟ್ರ ಎದುರಿನ ಪಂದ್ಯ.
ಪಂದ್ಯ-4 (ಆಲೂರು ಕ್ರೀಡಾಂಗಣ-2)
ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 87.2 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 270 (ಅರಿಂದಾಮ್ ದಾಸ್ 29, ಸುದೀಪ್ ಚಟರ್ಜಿ 39, ಸಾಂದೀಪನ್ ದಾಸ್ 91; ಬನಿತ್ ರಾಯ್ 35ಕ್ಕೆ2, ವಿಕಿ ಸಹಾ 47ಕ್ಕೆ2). ತ್ರಿಪುರ ಕ್ರಿಕೆಟ್ ಸಂಸ್ಥೆ ಎದುರು.
ಪಂದ್ಯ-5 (ಆಲೂರು ಕ್ರೀಡಾಂಗಣ-3)
ಒಡಿಶಾ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 71.4 ಓವರ್ಗಳಲ್ಲಿ 194 (ಗೋವಿಂದ್ ಪೊಡ್ಡಾರ್ 100; ರಾಹುಲ್ 51ಕ್ಕೆ4, ಆಶೀಶ್ ಹೂಡಾ 35ಕ್ಕೆ3); ಹರಿಯಾಣ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 22 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 68 (ಅಭಿಮನ್ಯು ಬ್ಯಾಟಿಂಗ್ 31, ರಾಹುಲ್ ದಲಾಲ್ ಬ್ಯಾಟಿಂಗ್ 28; ಅಲೋಕ್ 23ಕ್ಕೆ2).
ಪಂದ್ಯ-6 (ಬಿಜಿಎಸ್ ಕ್ರೀಡಾಂಗಣ)
ಕೇರಳ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 98 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 304 (ಜಗದೀಶ್ 101, ನಿಖಿಲೇಶ್ ಸುರೇಂದ್ರನ್ 93, ರೋಹಾನ್ ಪ್ರೇಮ್ 53; ಸ್ಟಾಲಿನ್ ಹೂವರ್ 52ಕ್ಕೆ1); ಕೆಎಸ್ಸಿಎ ಅಧ್ಯಕ್ಷರ ಇಲೆವೆನ್ ಎದುರಿನ ಪಂದ್ಯ.
ಪಂದ್ಯ-7 (ಎಸ್ಜೆಸಿಇ ಎಂಜಿನಿಯರಿಂಗ್ ಕಾಲೇಜ್ ಕ್ರೀಡಾಂಗಣ; ಮೈಸೂರು)
ಕೆಎಸ್ಸಿಎ ಕಾರ್ಯದರ್ಶಿಗಳ ಇಲೆವೆನ್: ಮೊದಲ ಇನಿಂಗ್ಸ್ 47 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 138 (ಮಯಂಕ್ ಅಗರವಾಲ್ 30, ಕರುಣ್ ನಾಯರ್ ಬ್ಯಾಟಿಂಗ್ 60, ಅರ್ಜುನ್ ಹೊಯ್ಸಳ ಬ್ಯಾಟಿಂಗ್ 35; ಅಜಯ್ ಕುಮಾರ್ 23ಕ್ಕೆ1); ಆಂಧ್ರ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯ (ಪಂದ್ಯಕ್ಕೆ ಮಳೆ ಅಡ್ಡಿ).
ಪಂದ್ಯ-8 (ಗಂಗೋತ್ರಿ ಗ್ಲೇಡ್ಸ್; ಮೈಸೂರು)
ಅಸ್ಸಾಂ ಕ್ರಿಕೆಟ್ ಸಂಸ್ಥೆ: ಮೊದಲ ಇನಿಂಗ್ಸ್ 45.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 132 (ಪಾರಿವಿಜ್ ಅಜೀಜ್ 29, ಅವಿಜಿತ್ ಸಿಂಗ್ ರಾಯ್ ಬ್ಯಾಟಿಂಗ್ 30; ಬಾಬಖಾನ್ ಪಠಾಣ್ 45ಕ್ಕೆ2); ಬರೋಡ ಕ್ರಿಕೆಟ್ ಸಂಸ್ಥೆ ಎದುರಿನ ಪಂದ್ಯ. (ಪಂದ್ಯಕ್ಕೆ ಮಳೆ ಅಡ್ಡಿ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.