ಕೆಜಿಎಫ್: ಪಡಿತರ ವಿತರಣೆಗೆ ಮೀಸಲಾಗಿದ್ದ ಅಕ್ಕಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿದ್ದ ಅನುಮಾನದ ಮೇರೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ದಾಸರಹೊಸಹಳ್ಳಿಯ ಅಕ್ಕಿಗಿರಣಿ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿದ್ದಾರೆ.
ಸಚಿವೆ ಶೋಭಾ ಕರಂದಾಜ್ಲೆ ಮತ್ತು ಅಧಿಕಾರಿಗಳು ವೈಟ್ಫೀಲ್ಡ್ ಬಳಿ ಗಿರಣಿ ಮೇಲೆ ಗುರುವಾರ ಮಧ್ಯಾಹ್ನ ದಾಳಿ ನಡೆಸಿದಾಗ ಸುಮಾರು 40 ಸಾವಿರ ಕೆ.ಜಿ.ಗಳಷ್ಟು ಪಡಿತರ ಅಕ್ಕಿ ಪತ್ತೆಯಾಗಿತ್ತು.
ಈ ಸಂದರ್ಭದಲ್ಲಿ ದಾಸರಹೊಸಹಳ್ಳಿಯ ವಸೀವುಲ್ಲಾ ಮಾಡರ್ನ್ ರೈಸ್ ಮಿಲ್ನ ಇನ್ವಾಯ್ಸ ಪತ್ತೆಯಾಗಿತ್ತು. ಈ ಜಾಡನ್ನು ಅನುಸರಿಸಿ ಇಲಾಖೆ ಆಯುಕ್ತ ಗೋವಿಂದರಾಜು ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಾತ್ರಿ ಗಿರಣಿ ಮೇಲೆ ದಾಳಿ ನಡೆಸಿ, ಗೋದಾಮುಗಳಿಗೆ ಬೀಗಮುದ್ರೆ ಹಾಕಿತು.
ಗೋದಾಮಿನಲ್ಲಿರುವ ಅಕ್ಕಿ ವಿವರಗಳನ್ನು ಪತ್ತೆ ಹಚ್ಚಲು ಗೋದಾಮಿಗೆ ಬೀಗಮುದ್ರೆ ಹಾಕಲಾಗಿದೆ. ಬೆಳಿಗ್ಗೆ ಇನ್ನಷ್ಟು ಅಧಿಕಾರಿಗಳ ತಂಡವನ್ನು ಕಾರ್ಯಾಚರಣೆಗೆ ಇಳಿಸಿ ನಿಖರ ಮಾಹಿತಿಯನ್ನು ಪಡೆಯಲಾಗುವುದು ಎಂದು ಆಯುಕ್ತ ಗೋವಿಂದರಾಜ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.