ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಸಂಬಂಧ ರಾಜ್ಯ ಲೋಕಸೇವಾ ಆಯೋಗವು ಇದೇ 9 ಮತ್ತು 10ರಂದು ಸಂದರ್ಶನ ನಡೆಸಲಿದೆ. ಸಂದರ್ಶನಕ್ಕೆ ಹಾಜರಾಗಲು ಅರ್ಹರಿರುವ ಅಭ್ಯರ್ಥಿಗಳಿಗೆ ಸೂಚನಾ ಪತ್ರಗಳನ್ನು ಈಗಾಗಲೇ ಕಳುಹಿಸಲಾಗಿದೆ.
ಅರ್ಹ ಅಭ್ಯರ್ಥಿಗಳ ಹೆಸರು ಮತ್ತು ಸಂದರ್ಶನದ ವೇಳಾಪಟ್ಟಿಯನ್ನು ಆಯೋಗದ ವೆಬ್ಸೈಟ್ನಲ್ಲಿ (http://kpsc.kar.nic.in) ಪ್ರಕಟಿಸಲಾಗಿದೆ ಎಂದು ಆಯೋಗದ ಕಾರ್ಯದರ್ಶಿ ಡಾ.ಡಿ.ಎಸ್. ವಿಶ್ವನಾಥ್ ತಿಳಿಸಿದ್ದಾರೆ.
ವೇಳಾಪಟ್ಟಿ ಇಂತಿದೆ: ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರ 20 ಹುದ್ದೆಗಳಿಗೆ ಇದೇ 9ರಂದು ಬೆಳಿಗ್ಗೆ 9.30ಕ್ಕೆ ಸಂದರ್ಶನ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) 14 ಸಹಾಯಕ ಎಂಜಿನಿಯರ್ಗಳ ಹುದ್ದೆ ಹಾಗೂ ಒಂದು ಕಿರಿಯ ಎಂಜಿನಿಯರ್ ಹುದ್ದೆಗೆ ಅದೇ ದಿನ ಮಧ್ಯಾಹ್ನ 2 ಗಂಟೆಗೆ ಸಂದರ್ಶನ ನಡೆಯಲಿದೆ.
ಕೆಐಎಡಿಬಿಯಲ್ಲಿ ಉಪ ಅಭಿವೃದ್ಧಿ ಅಧಿಕಾರಿ (ಎರಡು ಹುದ್ದೆಗಳು), ಸಹಾಯಕ ಎಲೆಕ್ಟ್ರಿಕಲ್ ಎಂಜಿನಿಯರ್ (ನಾಲ್ಕು ಹುದ್ದೆಗಳು) ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ರಸಾಯನ ಶಾಸ್ತ್ರಜ್ಞರ ಎರಡು ಹುದ್ದೆಗಳಿಗೆ 10ರಂದು ಬೆಳಿಗ್ಗೆ 9.30ಕ್ಕೆ ಸಂದರ್ಶನ ನಡೆಯಲಿದೆ.ಸಂದರ್ಶನ ಪತ್ರ ದೊರೆಯದಿದ್ದವರು ಅಗತ್ಯ ದಾಖಲೆಗಳೊಡನೆ ಆಯೋಗದ ಕೇಂದ್ರ ಕಚೇರಿಗೆ ನಿಗದಿತ ದಿನಾಂಕದ ಮೊದಲು ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.