ಹಳೇಬೀಡು: ಅರಸೀಕೆರೆ ಪಟ್ಟಣಕ್ಕೆ ಬೇಲೂರು ಯಗಚಿ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಪಟ್ಟಣದ ಬೇಲೂರು- ಬಾಣಾವರ ರಸ್ತೆ ಮಧ್ಯದಲ್ಲಿ ಕಾಮಗಾರಿ ನಡೆಸಿದ ಪರಿಣಾಮ ರಸ್ತೆ ಹಾಳಾಗಿ ಕೆಸರು ಗದ್ದೆಯಂತಾಗಿದೆ.
ಈ ರಸ್ತೆಯಲ್ಲಿ ಜನರಿಗೆ ಸಂಚರಿಸಲು ಕಿರಿಕಿರಿ ಉಂಟಾಗಿದೆ. ಕೆಸರಿನ ರಾಡಿ ವಾಹನಗಳು ಚಲಿಸುವಾಗ ಜನರ ಮೇಲೆ ಚಿಮ್ಮುತ್ತಿದೆ. ಮಳೆ ನೀರಿ ನೊಂದಿಗೆ ಕಸಕಡ್ಡಿ ಹರಿದು ಬಂದು ಕೆಸರಿನೊಂದಿಗೆ ಮಿಶ್ರಣವಾಗಿದೆ. ಜನರು ಅಸಹ್ಯಪಟ್ಟುಕೊಂಡು ಓಡಾ ಡುತ್ತಿದ್ದಾರೆ. ಕೆಸರು ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ಭಯ ವಾಗುತ್ತಿದೆ ಎನ್ನುತ್ತಾರೆ ಚಾಲಕರು.
ಪೈಪ್ಲೈನ್ ಮಾಡಿದ ಸಂದರ್ಭದಲ್ಲಿ ಮಣ್ಣು ಸಡಿಲಗೊಂಡು ಹತ್ತಾರು ವಾಹನಗಳು ರಸ್ತೆಯಲ್ಲಿ ಹೂತುಕೊಂಡಿದ್ದವು. ರಸ್ತೆ ಉದ್ದಕ್ಕೂ ಗಟ್ಟಿಮಣ್ಣು ಹರಡಿದ ನಂತರ ದೂಳು ಆವರಿಸಿತು. ರಸ್ತೆ ಬದಿಯ ಅಂಗಡಿಗಳಲ್ಲಿ ದೂಳು ತುಂಬಿಕೊಂಡಿದ್ದರಿಂದ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸಿದರು.
ಬೃಹತ್ ವಾಹನ ಸಂಚರಿಸಿದಾಗ ಈಗ ಕೊಚ್ಚೆ ನೀರು ಅಂಗಡಿಗಳಿಗೆ ರಾಚುತ್ತದೆ. ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಲಿರುವ ಈ ರಸ್ತೆಯ ವ್ಯಾಪಾರಿಗಳು ಹಾಗೂ ನಿವಾಸಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ. ಶೀಘ್ರದ್ಲ್ಲಲೇ ರಸ್ತೆ ಸ್ಥಿತಿಗೆ ತರಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.