ಶಿವಮೊಗ್ಗ: `ಇದು ನ್ಯಾಯಕ್ಕೆ ಸಿಕ್ಕ ಜಯ. ನೆಲದ ಕಾನೂನಿಗೆ ಸಿಕ್ಕ ಗೌರವವಾಗಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಇದು ತೋರಿಸಿದೆ~ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನದ ವಾರೆಂಟ್ ಜಾರಿಯಾದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಶನಿವಾರ ಇಲ್ಲಿ ನಡೆದ ಕಾಂಗ್ರೆಸ್ ಜಿಲ್ಲಾಮಟ್ಟದ ಚಿಂತನ-ಮಂಥನ ಸಮಾವೇಶದಲ್ಲಿ ಸಂಭ್ರಮ ವ್ಯಕ್ತವಾಯಿತು.
ಚಿಂತನ-ಮಂಥನ ಸಮಾವೇಶ ನಡೆಯುತ್ತಿದ್ದಾಗ ಯಡಿಯೂರಪ್ಪ ವಿರುದ್ಧ ಜಾರಿಗೊಳಿಸಿದ ಬಂಧನದ ವಾರೆಂಟ್ ಸುದ್ದಿ ತಿಳಿಯುತ್ತಿದ್ದಂತೆ ವೇದಿಕೆಯಲ್ಲಿದ್ದ ಎಲ್ಲಾ ಕಾಂಗ್ರೆಸ್ ಮುಖಂಡರು ಎದ್ದು ನಿಂತು ಪರಸ್ಪರ ಕೈ ಕುಲುಕಿ, ಕೇಕೆ ಹಾಕಿ ಸಂಭ್ರಮಿಸಿದರು. ನಂತರ ಎಲ್ಲರೂ ಜನರತ್ತ ಕೈ ಬೀಸಿ ಒಗ್ಗಟ್ಟು ಪ್ರದರ್ಶಿಸಿದರು.
ಸಿದ್ದರಾಮಯ್ಯ ಅವರು ಮಾತ್ರ ಪದೇ ಪದೇ ಎದ್ದು-ಕುಳಿತು `ಯಡಿಯೂರಪ್ಪಗೆ ಅಂತೂ ಜೈಲಾಯಿತು~ ಎಂದು ದೊಡ್ಡದಾಗಿ ಹೇಳುತ್ತಾ, ಕೈ ಮುಷ್ಠಿ ಕಟ್ಟಿ ಜನರತ್ತ ನೋಡಿ ಕೇಕೆ ಹಾಕಿದರು.