ಕಾರವಾರ: ಕೈಗಾ ಅಣು ಸ್ಥಾವರದ ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರುವ ಗ್ರಾಮಸ್ಥರ ಸಮಸ್ಯೆ ಬಗೆಹರಿ ಸಲು ಕೇಂದ್ರಕ್ಕೆ ನಿಯೋಗ ಕೊಂಡೊ ಯ್ಯುವ ಬಗ್ಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಜಿಲ್ಲೆಯ ಸಚಿವರೊಂದಿಗೆ ಮಾತುಕತೆ ನಡೆಸುವು ದಾಗಿ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತೆ ಹೆಗಡೆ ಆಶೀಸರ ಭರವಸೆ ನೀಡಿದರು.
ಕೈಗಾ ಅಣು ವಿದ್ಯುತ್ ಸ್ಥಾವರದ ಐದು ಕಿಲೋ ಮೀಟರ್ ವ್ಯಾಪ್ತಿಯೊ ಳಗಿರುವ ಗ್ರಾಮಗಳ ಜಮೀನು ಸ್ವಾಧೀನಪಡಿಸಿಕೊಂಡು ಪುನರ್ವಸತಿ ಕಲ್ಪಿಸಬೇಕು ಎಂದು ಇಲ್ಲಿಯ ಜಿಲ್ಲಾಧಿ ಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿರುವ ಗ್ರಾಮಸ್ಥ ರನ್ನು ಬುಧವಾರ ಭೇಟಿ ಮಾಡಿ ಅವರು ಮಾತನಾಡಿದರು.
ಜನತೆಯನ್ನು ಸ್ಥಳಾಂತರಿಸುವ ಅಧಿಕಾರ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಅದು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದರು.
ಕೈಗಾ ಸುತ್ತಮುತ್ತ ಆರೋಗ್ಯ ಸಮಸ್ಯೆ ಇದೆ.ಈ ನಿಟ್ಟಿನಲ್ಲಿ ಮುಂಬೈ ಟಾಟಾ ವಿಜ್ಞಾನ ಸಂಸ್ಥೆ ಹಾಗೂ ಮಣಿಪಾಲ ಆರೋಗ್ಯ ಸಂಸ್ಥೆಯಿಂದ ಸಮೀಕ್ಷೆ ನಡೆಸಲಾಗುವುದು. ಆರೋಗ್ಯ ಸಮೀಕ್ಷೆ ಕೈಗಾ ಅಣು ಸ್ಥಾವರದಿಂದ 16 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರುವ 43 ಗ್ರಾಮಗಳಲ್ಲಿ ನಡೆಯಲಿದೆ ಎಂದು ಅವರು ನುಡಿದರು.
ಗ್ರಾಮಸ್ಥರ ಹೋರಾಟ ಸಮಿತಿ ಅಧ್ಯಕ್ಷ ಶಾಮನಾಥ ನಾಯ್ಕ, ಯಮುನಾ ಗಾಂವ್ಕರ್, ಸಿ.ಕೆ.ಸಿದ್ದರಕರ್ ಹಾಜರಿದ್ದರು.