ನವದೆಹಲಿ (ಪಿಟಿಐ): ದೇಶದ ಕೈಗಾರಿಕೆ ವೃದ್ಧಿ ದರ (ಐಐಪಿ) ಏಪ್ರಿಲ್ ತಿಂಗಳಲ್ಲಿ ತೀವ್ರ ಕುಸಿತ ಕಂಡು ಶೇ 6.3ರಷ್ಟಾಗಿದೆ.ಸರ್ಕಾರ ಇದನ್ನು `ಆತಂಕದ ಪರಿಸ್ಥಿತಿ~ ಎಂದು ಬಣ್ಣಿಸಿದೆ. ಕೈಗಾರಿಕೆ ಉತ್ಪಾದನೆಗೆ ಗರಿಷ್ಠ ಕೊಡುಗೆ ನೀಡುವ ತಯಾರಿಕೆ ಮತ್ತು ಗಣಿಗಾರಿಕೆ ಕ್ಷೇತ್ರಗಳು ಈ ಅವಧಿಯಲ್ಲಿ ಮಂದಗತಿಯ ಪ್ರಗತಿ ಸಾಧಿಸಿರುವುದು ವೃದ್ಧಿ ದರ ಕುಸಿಯುವಂತೆ ಮಾಡಿದೆ.
ಕೈಗಾರಿಕೆ ಪ್ರಗತಿ ಕುಸಿದಿರುವುದು ನಿರೀಕ್ಷಿತ ಆರ್ಥಿಕ ವೃದ್ಧಿಗೆ (ಜಿಡಿಪಿ) ಹಿನ್ನಡೆ ತರಲಿದೆ ಎಂದು ಸರ್ಕಾರ ಹೇಳಿದೆ. ಇದು ಕ್ಷೋಭೆಗೊಳಿಸುವಂತ ಪರಿಸ್ಥಿತಿ ಎಂದಿರುವ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಕೈಗಾರಿಕೆ ಕ್ಷೇತ್ರದ ಚೇತರಿಕೆಗಾಗಿ ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಹೆಚ್ಚಿಸಿರುವುದು ಕೈಗಾರಿಕಾ ಕ್ಷೇತ್ರಕ್ಕೆ ಪೆಟ್ಟು ನೀಡಿದೆ.