ಕೆ.ಎಲ್. ನಂಜಪ್ಪ ಪ್ರತಿಷ್ಠಾನ ಹಾಗೂ ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘವು (ಕಾಸಿಯಾ) ಸಂಯುಕ್ತವಾಗಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ `ನೆನಪಿನ ಸಾಲು ದೀಪಗಳು~ (ಕೆ.ಎಲ್. ನಂಜಪ್ಪ ಅವರ ಆತ್ಮಕಥೆ) ಕೃತಿ ಬಿಡುಗಡೆ ಮತ್ತು ಕೆ.ಎಲ್. ನಂಜಪ್ಪನವರ 22 ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ದೇಶದ ಅಭಿವೃದ್ಧಿಯಾಗಬೇಕಾದರೆ ಸಣ್ಣ ಪ್ರಮಾಣದ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕು ಎಂದು ಗಾಂಧೀಜಿಯವರು ಹೇಳಿದ ಮಾತುಗಳನ್ನು ಮನಗಂಡು ಅದರಂತೆ ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಗೆ ನಂಜಪ್ಪ ಅವರು ಶ್ರಮಿಸಿದರು~ ಎಂದರು.
`ಗುಡಿ ಕೈಗಾರಿಕೆ ಮತ್ತು ಕರಕುಶಲ ವಸ್ತುಗಳ ನಿರ್ಮಾಣಕ್ಕೆ ಅವರು ಹೆಚ್ಚಿನ ಒತ್ತು ನೀಡಿದರು. ಅಲ್ಲದೇ, ಕರಕುಶಲ ವಸ್ತುಗಳ ನಿರ್ಮಾಣದ ಹಿಂದಿರುವ ವೃತ್ತಿಪರ ಕಲಾವಿದರ ಪ್ರತಿಭೆಯನ್ನು ಗುರುತಿಸುವ ಪ್ರಯತ್ನ ಮಾಡಿದರು~ ಎಂದು ಹೇಳಿದರು.
`ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಕೆ.ಎಲ್. ನಂಜಪ್ಪ ನವರ ಕೊಡುಗೆ ಅಪಾರವಾಗಿದ್ದರೂ ಸಹ ನಮ್ಮಲ್ಲಿ ಅದನ್ನು ಗುರುತಿಸುವ ಕಾರ್ಯವಾಗಿಲ್ಲ. ಈ ನಿಟ್ಟಿನಲ್ಲಿ `ನೆನಪಿನ ಸಾಲು ದೀಪಗಳು~ ಕೃತಿಯು ಅವರ ಆತ್ಮಕಥೆಯ ಮೂಲಕ ಅವರ ಸಾಧನೆಯನ್ನು ಗುರುತಿಸುವಂತಾಗಿದೆ~ ಎಂದು ಹೇಳಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿ, `ಕೆ.ಎಲ್. ನಂಜಪ್ಪ ಅವರು ಕೇವಲ ಸಣ್ಣ ಕೈಗಾರಿಕಾ ಕ್ಷೇತ್ರದಲ್ಲಿನ ಕೊಡುಗೆಯಿಂದಾಗಿ ಮಾತ್ರವಲ್ಲದೆ, ಅವರ ಪ್ರಾಮಾಣಿಕತೆ, ಜನಸೇವೆ ಮಾಡುವ ಮನೋಭಾವದಿಂದ ಜನಮಾನಸದಲ್ಲಿ ಉಳಿದಿದ್ದಾರೆ~ ಎಂದು ಹೇಳಿದರು.