ಚಿಕ್ಕಬಳ್ಳಾಪುರ: ಸಂಕ್ರಾಂತಿ ಹಬ್ಬದ ಪ್ರಯುಕ್ತ ಕ್ಲಸ್ಟರ್ ಕೈಮಗ್ಗ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಗರದ ಒಕ್ಕಲಿಗರ ಭವನದಲ್ಲಿ ಗುರುವಾರ ಆರಂಭಗೊಂಡಿತು. ಜ. 18ರ ವರೆಗೆ ನಡೆಯಲಿರುವ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 20 ಕೈಮಗ್ಗ ನೇಕಾರರ ಸಂಘದವರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದಾರೆ.
ಮೇಳಕ್ಕೆ ಉಚಿತ ಪ್ರವೇಶವಿದ್ದು, ಉತ್ಪನ್ನಗಳ ಖರೀದಿಗೆ ಶೇ 20ರಷ್ಟು ರಿಯಾಯಿತಿ ಸೌಲಭ್ಯವಿದೆ.
ಚಿಕ್ಕಬಳ್ಳಾಪುರ, ಚಿಂತಾಮಣಿ ಸೇರಿದಂತೆ ವಿವಿಧ ತಾಲ್ಲೂಕುಗಳ ಸಂಘದ ಸದಸ್ಯರು ಮಳಿಗೆಗಳನ್ನು ಇಟ್ಟಿದ್ದಾರೆ. ಕೈಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ವೈವಿಧ್ಯಮಯ ಹತ್ತಿ, ರೇಷ್ಮೆ ಸೀರೆ ಮತ್ತು ಉಣ್ಣೆ ಬಟ್ಟೆಗಳನ್ನು ಪ್ರದರ್ಶಿಸಲಾಗಿದೆ.
`ಚಿಂತಾಮಣಿ ತಾಲ್ಲೂಕು ತಿಮ್ಮಸಂದ್ರ ಗ್ರಾಮದಲ್ಲಿ 500ಕ್ಕೂ ಹೆಚ್ಚು ಕೈಮಗ್ಗ ನೇಕಾರರು ಕೆಲಸ ಮಾಡುತ್ತಿದ್ದು, ಅವರ ಸಮಗ್ರ ಅಭಿವೃದ್ಧಿಗಾಗಿ ತಿಮ್ಮಸಂದ್ರ ಕ್ಲಸ್ಟರ್ ಗುರುತಿಸಿ, ಕೇಂದ್ರ ಸರ್ಕಾರದ ಯೋಜನೆಯಡಿ ಕಾರ್ಯಕ್ರಮ ರೂಪಿಸಲಾಗಿದೆ. ಕಾರ್ಯಕ್ರಮದಡಿ ಕೆಲಸಗಾರರಿಗೆ ಕೈಮಗ್ಗ ನೇಯ್ಗೆ ಹಾಗೂ ಡಿಸೈನಿಂಗ್ ತರಬೇತಿ, ಅಧ್ಯಯನ ಪ್ರವಾಸ, ಮಗ್ಗಗಳ ಆಧುನೀಕರಣ, ಮಾರಾಟ ಮೇಳ ಏರ್ಪಡಿಸುವುದು ಮುಂತಾದ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ~ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿ ಸೌಮ್ಯಾ ತಿಳಿಸಿದರು.