ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಗುರುವಾರ ಕೂಡ ಮಳೆ ಮುಂದುವರಿದಿದೆ. ಮೂರ್ನಾಲ್ಕು ದಿನಗಳಿಂದ ತುಂತುರಾಗಿ ಸುರಿಯುತ್ತಿದ್ದ ಮಳೆ ಈಗ ದಿನವಿಡೀ ಸುರಿಯತೊಡಗಿದೆ.
ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ, ಹುದಿಕೇರಿ, ಶ್ರೀಮಂಗಲ, ಪೊನ್ನಂಪೇಟೆ, ಅಮ್ಮತ್ತಿ, ಬಾಳಲೆ, ಸೋಮವಾರಪೇಟೆ, ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆ, ಸುಂಟಿಕೊಪ್ಪ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಸುರಿದಿದೆ.
ಮಡಿಕೇರಿಯಲ್ಲೂ ಬೆಳಿಗ್ಗೆಯಿಂದಲೇ ಮಳೆ ಸುರಿದಿದೆ. ಮಧ್ಯಾಹ್ನ ಕೊಂಚ ಬಿಡುವು ಪಡೆದುಕೊಂಡ ಮಳೆ ನಂತರ ಸಂಜೆಯವರೆಗೆ ಮುಂದುವರಿದಿತ್ತು.
ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 8ಗಂಟೆ ಅವಧಿ ಅಂತ್ಯಗೊಂಡಂತೆ 24 ಗಂಟೆಯಲ್ಲಿ 38.36 ಮಿ.ಮೀ. ಸರಾಸರಿ ಮಳೆ ಸುರಿದಿದೆ. ಜನವರಿಯಿಂದ ಇಲ್ಲಿಯವರೆಗೆ 3,029.48 ಮಿ.ಮೀ. ಮಳೆ ದಾಖಲಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 54.95 ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 31.02 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 29.1 ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 40.4 ಮಿ.ಮೀ., ನಾಪೋಕ್ಲು 39.8 ಮಿ.ಮೀ., ಸಂಪಾಜೆ 33.4 ಮಿ.ಮೀ., ಭಾಗಮಂಡಲ 106.2 ಮಿ.ಮೀ., ವೀರಾಜಪೇಟೆ ಕಸಬಾ 20.2 ಮಿ.ಮೀ., ಹುದಿಕೇರಿ 33 ಮಿ.ಮೀ., ಪೊನ್ನಂಪೇಟೆ 87.2 ಮಿ.ಮೀ., ಶನಿವಾರಸಂತೆ 33.2 ಮಿ.ಮೀ., ಶಾಂತಳ್ಳಿ 61.2 ಮಿ.ಮೀ., ಕೊಡ್ಲಿಪೇಟೆ 35 ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2,858.57 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳ ಹರಿವು 2,490 ಕ್ಯೂಸೆಕ್ ಆಗಿದೆ. ಇಂದಿನ ನೀರಿನ ಹೊರ ಹರಿವು ನದಿಗೆ 1,537, ನಾಲೆಗೆ 1,400 ಕ್ಯೂಸೆಕ್ ಆಗಿದೆ.
ಭಾರಿ ಮಳೆ: ತುಂಬಿ ಹರಿದ ತೊರೆ
ಗೋಣಿಕೊಪ್ಪಲು: ಎರಡು ದಿನಗಳಿಂದ ಮಳೆ ನಿರಂತರವಾಗಿ ಬೀಳುತ್ತಿದ್ದು, ಬತ್ತದ ಗದ್ದೆಗಳಲ್ಲಿ ನೀರು ತುಂಬಿ ಕೃಷಿಗೆ ಸಹಕಾರಿಯಾಗಲಿದೆ ಎನ್ನಲಾಗಿದೆ. ಬುಧವಾರ ರಾತ್ರಿ ಬಿದ್ದ ಮಳೆಗೆ ತೊರೆ ತೋಡುಗಳು ತುಂಬಿ ಹರಿದವು. ಗುರುವಾರವೂ ಮಳೆಯ ರಭಸ ಮುಂದುವರಿಯಿತು.
ಶ್ರೀಮಂಗಲ, ಕುಟ್ಟ, ಹುದಿಕೇರಿ ಭಾಗಕ್ಕೆ ಬಿದ್ದ ಮಳೆಗೆ ಲಕ್ಷ್ಮಣ ತೀರ್ಥ ನದಿ ನೀರು ಮೇಲೇರತೊಡಗಿದೆ. ಗುರುವಾರ ಆಗಾಗ್ಗೆ ರಭಸದ ಮಳೆ ಬಿದ್ದಿತು. ಗೋಣಿಕೊಪ್ಪಲು, ಪೊನ್ನಂಪೇಟೆ, ಪಾಲಿಬೆಟ್ಟ ತಿತಿಮತಿ ಮೊದಲಾದ ಭಾಗಗಳಿಗೆ ಉತ್ತಮ ಮಳೆಯಾಗಿದೆ. ಕೆಲವು ದಿನಗಳ ಹಿಂದೆ ಭೀಕರ ಬಿಸಿಲು ಕಾಣಿಸಿಕೊಂಡು ಬತ್ತದ ಗದ್ದೆಗಳು ನೀರಿಲ್ಲದೆ ಬಿರುಕು ಬಿಟ್ಟಿದ್ದವು. ಆದರೆ ಇದೀಗ ಬಿದ್ದ ಮಳೆ ಬತ್ತದ ಕೃಷಿ ಕಂಗೊಳಿಸುವಂತೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.