ಕೊಪ್ಪ: ತಾಲ್ಲೂಕಿನ ಛಾವಲ್ಮನೆ ಗ್ರಾಮದ ಬಿಳ್ಮುಡಿ ನೀರು ಸರಬರಾಜು ಘಟಕವನ್ನು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಡಿ.ಎನ್.ಜೀವರಾಜ್ ಸೋಮವಾರ ಉದ್ಘಾಟಿಸಿದರು.
ಬಿಳ್ಮುಡಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ತುಂಗಾನದಿಯಿಂದ ನೀರೆತ್ತಿ 45 ಕುಟುಂಬಗಳಿಗೆ ನೀರೊದಗಿಸುವ 8ಲಕ್ಷ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ ಅವರು, ಕ್ಷೇತ್ರದಲ್ಲಿ ಕಳೆದ ಏಳು ವರ್ಷಗಳಿಂದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಬಹುತೇಕ ಬೇಡಿಕೆಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗಿದೆ ಎಂದರು.
ಕಮ್ಮರಡಿ, ಹರಿಹರಪುರ ರಸ್ತೆಯನ್ನು 6.75ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಜೆ.ಪಿ.ನಗರ, ಮಕ್ಕಿಕೊಪ್ಪ, ಕೊಡ್ತಾಳು, ಶೆಟ್ಟಿಕೊಪ್ಪ, ಕನಕಪುರ, ನಾಗಲಗೋಡು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರೌಢಶಾಲಾ ದುರಸ್ತಿ, ಹೊನ್ನೆಕಟ್ಟೆ, ಛಾವಲ್ಮನೆ ಕುಡಿಯುವ ನೀರು ಯೋಜನೆ ಕೈಗೊಳ್ಳಲಾಗಿದೆ ಎಂದರು.
ಛಾವಲ್ಮನೆ ಗ್ರಾ.ಪಂ.ಅಧ್ಯಕ್ಷೆ ಕೆ.ಆರ್.ನೇತ್ರಾವತಿ ರಾಘವೇಂದ್ರ, ತಾ.ಪಂ. ಅಧ್ಯಕ್ಷೆ ಪದ್ಮಾವತಿ, ಬೆಳಗುಳ ರಮೇಶ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ ಇದ್ದರು.