ಚಿತ್ರದುರ್ಗ: ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಶನಿವಾರ ನಗರದ ಒಂದನೇ ಹೆಚ್ಚುವರಿ ಕಿರಿಯ ಸಿವಿಲ್ ನ್ಯಾಯಾಲಯದ ಮುಂದೆ ಹಾಜರಾದರು.
ಶಿವಮೂರ್ತಿ ಮುರುಘಾ ಶರಣರು ರಚಿಸಿದ `ಅಭಿವೃದ್ಧಿ ಹಾದಿಗೆ ಮುಳ್ಳಿನ ಹಾಸಿಗೆ' ಕೃತಿ ವಿರುದ್ಧ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಹಾಲಿ ಶಾಸಕ ಎಸ್.ಕೆ. ಬಸವರಾಜನ್ ನ್ಯಾಯಾಲಯದಲ್ಲಿ 6 ತಿಂಗಳ ಹಿಂದೆ ಖಾಸಗಿ ಮೊಕದ್ದಮೆ ದಾಖಲಿಸಿದ್ದರು.
ಎಸ್.ಕೆ. ಬಸವರಾಜನ್ ನೀಡಿರುವ ಉಪದ್ರವಗಳು, ತೊಂದರೆಗಳು, ಕಿರುಕುಳಗಳು ಮತ್ತು ಅವುಗಳನ್ನು ಹೇಗೆ ಎದುರಿಸಲಾಯಿತು ಹಾಗೂ ಮುರುಘಾ ಮಠದ ಪ್ರಗತಿಗೆ ಬಸವರಾಜನ್ ಹೇಗೆ ಅಡ್ಡಿಯಾದರು ಎನ್ನುವುದನ್ನು ಶರಣರು ಈ ಕೃತಿಯಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ 500, 501 ಕಲಂ ಅಡಿ ಬಸವರಾಜನ್ ಮೊಕದ್ದಮೆ ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾರಿ ಮಾಡಿದ ಸಮನ್ಸ್ನಂತೆ ಭಕ್ತರು ಹಾಗೂ ಎಸ್ಜೆಎಂ ವಿದ್ಯಾಪೀಠದ ನೌಕರರ ಜತೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಧೀಶರ ಮುಂದೆ ಹಾಜರಾದರು. ಜಾಮೀನು ಕೋರಿ ಶರಣರ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಏ.22ಕ್ಕೆ ಮುಂದೂಡಿತು.
`ಮಠದಲ್ಲಿ ಭಕ್ತರ ಭೇಟಿ, ಸಂಸ್ಥೆಯ ಆಡಳಿತ ಜವಾಬ್ದಾರಿ ಇತ್ಯಾದಿ ಕಾರ್ಯಗಳಿಂದ ತಮಗೆ ನ್ಯಾಯಾಲಯಕ್ಕೆ ಪದೇ ಪದೇ ಬರಲು ಕಷ್ಟವಾಗುತ್ತದೆ. ಅತ್ಯಗತ್ಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗುತ್ತೇವೆ. ಆದ್ದರಿಂದ ತಮಗೆ ಹಾಜರಾತಿಯಿಂದ ವಿನಾಯ್ತಿ ನೀಡಬೇಕು' ಎಂದು ಕೋರಿ ಶರಣರ ವಕೀಲರು ಅರ್ಜಿ ಸಲ್ಲಿಸಿದರು.